– ಕೆಲಸ ಕಳೆದುಕೊಂಡಿದ್ದ ಶಿಕ್ಷಕನಿಗೆ ಸಹಾಯ
ಹೈದರಾಬಾದ್: ಮಹಾಮಾರಿ ಕೊರೊನಾ ಸಂದರ್ಭದಲ್ಲಿ ಅನೇಕರು ಉದ್ಯೋಗ ಕಳೆದುಕೊಂಡು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ತೆಲಂಗಾಣದಲ್ಲಿ ಕೆಲಸ ಕಳೆದುಕೊಂಡಿದ್ದ ಶಿಕ್ಷಕರೊಬ್ಬರಿಗೆ ವಿದ್ಯಾರ್ಥಿಗಳೆಲ್ಲರೂ ಸೇರಿ ಸಹಾಯ ಮಾಡಿದ್ದಾರೆ.
52 ವರ್ಷದ ಶಿಕ್ಷಕ ಹನುಮಂತುಲ ರಘು ಅವರಿಗೆ ವಿದ್ಯಾರ್ಥಿಗಳೆಲ್ಲರೂ ಸೇರಿ ಒಂದು ಟಿಫಿನ್ ಸೆಂಟರ್ ಶುರು ಮಾಡಲು ಅವರಿಗೆ ಒಂದು ಶೆಡ್ ನಿರ್ಮಾಣ ಮಾಡಿಕೊಟ್ಟಿದ್ದಾರೆ.
ಶಿಕ್ಷಕ ಹನುಮಂತುಲ ಅವರು ಜಗ್ತಿಯಲ್ ಜಿಲ್ಲೆಯ ಕೋರುಟ್ಲಾದ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಕೆಲವು ದಿನಗಳ ಹಿಂದೆ ಕೆಲಸ ಕಳೆದುಕೊಂಡಿದ್ದರು. ಇದರಿಂದ ಜೀವನ ನಡೆಸುವುದು ತುಂಬಾ ಕಷ್ಟವಾಗಿತ್ತು. ಅವರ ಮಗ ಬಿ.ಎಡ್ ಮುಗಿಸಿದ್ದನು. ಆದರೆ ಅವನು ಕೂಡ ನಿರೋದ್ಯೋಗಿ ಆಗಿದ್ದನು.
ಆರ್ಥಿಕವಾಗಿ ಕಷ್ಟ ಅನುಭವಿಸುತ್ತಿದ್ದ ಶಿಕ್ಷಕ ಹನುಮಂತುಲ ಬಗ್ಗೆ ತಿಳಿದ 1997-98 ಬ್ಯಾಚ್ನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ವಾಟ್ಸಪ್ ಮೂಲಕ ಎಲ್ಲಾ ವಿದ್ಯಾರ್ಥಿಗಳನ್ನು ಒಗ್ಗೂಡಿ ಅವರಿಗೆ ಸಹಾಯ ಮಾಡಲು ನಿರ್ಧರಿಸಿದ್ದರು. ಅದರಂತೆಯೇ ವಿದ್ಯಾರ್ಥಿಗಳು ಜೊತೆಗೂಡಿ ಉಪಹಾರ ಕೇಂದ್ರ ತೆರೆಯುವುದಕ್ಕೆ ಶೆಡ್ ನಿರ್ಮಿಸಿ ಕೊಟ್ಟಿದ್ದಾರೆ. ಈ ಟಿಫಿನ್ ಸೆಂಟರ್ಗೆ ವಿದ್ಯಾರ್ಥಿಗಳೆಲ್ಲರೂ ಸೇರಿ ‘ಗುರುದಕ್ಷಿಣ’ ಎಂದು ಹೆಸರಿಟ್ಟಿದ್ದಾರೆ.
ನಾನು ರುದ್ರಂಗಿ ಜಿಲ್ಲಾ ಪಂಚಾಯಿತಿ ಶಾಲೆಯಲ್ಲಿ ಅತಿಥಿ ಶಿಕ್ಷಕರಾಗಿ ಇಂಗ್ಲಿಷ್ ಮತ್ತು ಜೀವಶಾಸ್ತ್ರವನ್ನು ವಿದ್ಯಾರ್ಥಿಗಳಿಗೆ ಕಲಿಸಿದ್ದೆ. ಅದನ್ನು ವಿದ್ಯಾರ್ಥಿಗಳು ಮರೆಯಲಿಲ್ಲ. ಇಂದು ನನ್ನ ರಕ್ಷಣೆಗೆ ಬಂದ ನನ್ನ ವಿದ್ಯಾರ್ಥಿಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ನನಗೆ ಪದಗಳಿಲ್ಲ ಎಂದು ರಘು ಸಂತಸದಿಂದ ಹೇಳಿದ್ದಾರೆ.
ಈಗಾಗಲೇ ಶೆಡ್ ಸಿದ್ಧವಾಗಿದ್ದು, ಈ ಮೂಲಕ ಶಿಕ್ಷಕ ಹನುಮಂತುಲ ಅವರು ಹೊಸ ಜೀವನವನ್ನು ಪ್ರಾರಂಭಿಸಿದ್ದಾರೆ. ಜೊತೆಗೆ ಅವರ ವಿದ್ಯಾರ್ಥಿಗಳು ಗ್ರಾಹಕರನ್ನು ಟಿಫಿನ್ ಸೆಂಟರ್ಗೆ ಕರೆತರುವ ಭರವಸೆ ನೀಡಿದ್ದಾರೆ.