ಪಾಕ್ ದುಃಸ್ಥಿತಿ ನೋಡಿದರೆ ಹಿಂದೂಸ್ಥಾನಿ ಮುಸ್ಲಿಂ ಆಗಿರುವುದಕ್ಕೆ ಹೆಮ್ಮೆ ಇದೆ- ಗುಲಾಂ ನಬಿ ಆಜಾದ್

Public TV
2 Min Read
ghulam nabi azad

– ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ ಆಜಾದ್

ನವದೆಹಲಿ: ಪಾಕಿಸ್ತಾನದ ದುಃಸ್ಥಿತಿಯನ್ನು ನೋಡಿದರೆ, ಭಾರತೀಯ ಮುಸ್ಲಿಂ ಆಗಿರುವುದಕ್ಕೆ ಹೆಮ್ಮೆ ಇದೆ ಎಂದು ಕಾಂಗ್ರೆಸ್ ರಾಜ್ಯಸಭಾ ಸದಸ್ಯ, ಪ್ರತಿ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಹೇಳಿದ್ದಾರೆ.

ರಾಜ್ಯಸಭೆ ಸದಸ್ಯತ್ವದ ಕೊನೇಯ ದಿನವಾದ ಇಂದು ವಿದಾಯ ಭಾಷಣ ಮಾಡಿದ ಅವರು, ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಪಾಕಿಸ್ತಾನಕ್ಕೆ ಹೋಗದ ಅದೃಷ್ಟವಂತ ಜನರಲ್ಲಿ ನಾನೂ ಇದ್ದೇನೆ. ಪಾಕಿಸ್ತಾನದ ಸ್ಥಿತಿಗತಿ ಕುರಿತು ಓದಿದಾಗ ಹಿಂದೂಸ್ಥಾನಿ ಮುಸ್ಲಿಂ ಆಗಿರುವುದಕ್ಕೆ ನನಗೆ ತುಂಬಾ ಹೆಮ್ಮೆ ಇದೆ ಎಂದು ರಾಜ್ಯಸಭೆಯಲ್ಲಿ ತಮ್ಮ ಕೊನೇಯ ಭಾಷಣಲ್ಲಿ ತಿಳಿಸಿದ್ದಾರೆ.

ghulam nabi azad 2

ಗುಲಾಂ ನಬಿ ಆಜಾದ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ತಿಳಿಸಿದ್ದು, ರಾಜ್ಯ ಸಭಾ ಸದಸ್ಯರ ಭಾಷಣವನ್ನು ಸಮಾಧಾನ ಚಿತ್ತದಿಂದ ಆಲಿಸಿದ್ದಕ್ಕೆ ಧನ್ಯವಾದಗಳು. ಹಲವಾರು ಸಂದರ್ಭಗಳಲ್ಲಿ ಪ್ರಧಾನಿ ಮೋದಿಯವರೊಂದಿಗೆ ಮಾತಿನ ಚಕಮಕಿ ನಡೆಸಿದ್ದೇನೆ. ಆದರೆ ಅವರು ನನ್ನ ಮಾತುಗಳನ್ನು ವೈಯಕ್ತಿಕವಾಗಿ ತೆಗೆದುಕೊಂಡಿಲ್ಲ. ಅಲ್ಲದೆ ನಾನು ಮೇಲ್ಮನೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದಾಗ ಏನಾದರೂ ಸಹಾಯ ಬೇಕಾ ಎಂದು ಕೇಳಿದ್ದರು ಎಂದು ಇದೇ ವೇಳೆ ನೆನೆದರು.

Narendra Modi 1

ನಿವೃತ್ತರಾಗುತ್ತಿರುವ ರಾಜ್ಯಸಭಾ ಸದಸ್ಯರನ್ನುದ್ದೇಶಿಸಿ ಬೆಳಗ್ಗೆಯಷ್ಟೇ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ತುಂಬಾ ಭಾವುಕರಾಗಿದ್ದರು. ಅಲ್ಲದೆ ಕಣ್ಣಲ್ಲಿ ನೀರು ತುಂಬಿದ್ದವು. ಗುಲಾಮ್ ನಬಿ ಆಜಾದ್ ಬಗ್ಗೆ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಗುಲಾಂ ನಬಿ ಆಜಾದ್ ಅವರ ಬೀಳ್ಕೊಡುಗೆ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಕಣ್ಣೀರು ಹಾಕಿದ್ದರು. ಗುಲಾಂ ನಬಿ ಆಜಾದ್ ಕಾರ್ಯಗಳನ್ನು ಶ್ಲಾಘಿಸಿದ ಮೋದಿ, ಆಜಾದ್ ಕೇವಲ ಪಕ್ಷದ ಬಗ್ಗೆ ಯೋಚಿಸುತ್ತಿರಲಿಲ್ಲ. ದೇಶ ಮತ್ತು ಸದನದ ಬಗ್ಗೆ ಕಾಳಜಿ ಹೊಂದಿದ್ದರು ಎಂದು ಹೇಳಿ ಭಾವುಕರಾಗಿದ್ದರು.

ghulam nabi azad 3

ಆಜಾದ್ ಅವರು ಜಮ್ಮು ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದ ಸಂದರ್ಭವನ್ನು ಪ್ರಸ್ತಾಪಿಸಿದ ಮೋದಿ, ಕಾಶ್ಮೀರದಲ್ಲಿ ಉಗ್ರರ ದಾಳಿಯಿಂದಾಗಿ ಗುಜರಾತಿನ ಜನ ಸಿಲುಕಿಕೊಂಡಾಗ ಆಜಾದ್ ಮತ್ತು ಪ್ರಣಬ್ ಮುಖರ್ಜಿ ಅವರ ಶ್ರಮವನ್ನು ನಾನು ಯಾವುದೇ ಕಾರಣಕ್ಕೂ ಮರೆಯಲು ಸಾಧ್ಯವಿಲ್ಲ. ಆ ದಿನ ರಾತ್ರಿ ಗುಲಾಂ ನಬಿ ಜೀ ಕರೆ ಮಾಡಿ ಮಾತನಾಡಿದ್ದರು ಎಂದು ಹೇಳಿ ಕಣ್ಣೀರು ಹಾಕಿದ್ದರು.

ಅವರು ತಮ್ಮ ಕುಟುಂಬದ ಸದಸ್ಯರಂತೆ ನಮ್ಮ ಜನರನ್ನು ನೋಡಿಕೊಂಡರು. ಅಧಿಕಾರ ಬರುತ್ತದೆ ಹೋಗುತ್ತದೆ. ಆದರೆ ಅಧಿಕಾರದಲ್ಲಿದ್ದಾಗ ಹೇಗೆ ಕೆಲಸ ಮಾಡಿದ್ದರು ಎಂಬುದು ನೆನಪಿನಲ್ಲಿರುತ್ತದೆ ಎಂದು ಹಳೆಯ ನೆನಪನ್ನು ಮೆಲುಕು ಹಾಕಿದ್ದರು.

Ghulam Nabi Azad PM Narendra Modi

ನಾನು ಮತ್ತು ಗುಲಾಂ ನಬಿ ಆಜಾದ್ ಹಲವು ವರ್ಷಗಳ ಹಿಂದೆಯೇ ಪರಿಚಿತರು. ನಾವಿಬ್ಬರು ಒಟ್ಟಿಗೆ ಮುಖ್ಯಮಂತ್ರಿಗಳಾಗಿದ್ದೆವು. ನಾನು ಮುಖ್ಯಮಂತ್ರಿ ಆಗುವುದಕ್ಕೂ ಮೊದಲೇ ಗುಲಾಂ ನಬಿ ಅವರ ಜೊತೆ ಮಾತನಾಡಿದ್ದೆ. ಬಹಳಷ್ಟು ಜನರಿಗೆ ಒಂದು ವಿಚಾರ ತಿಳಿದಿಲ್ಲ. ಆಜಾದ್ ಅವರಿಗೆ ಗಾರ್ಡನಿಂಗ್ ಅಂದರೆ ಬಹಳ ಇಷ್ಟ ಎಂದು ತಿಳಿಸಿದ್ದರು.

ghulam nabi azad 4

ಸೋಮವಾರ ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಮಾತನಾಡಿದ್ದ ಪ್ರಧಾನಿ ಮೋದಿ ಗುಲಾಂ ನಬಿ ಆಜಾದ್ ಅವರನ್ನು ಶ್ಲಾಘಿಸಿ ಕಾಂಗ್ರೆಸ್‍ಗೆ ಟಾಂಗ್ ನೀಡಿದ್ದರು. ಆಜಾದ್ ಅವರು ಜಮ್ಮು ಕಾಶ್ಮೀರದಲ್ಲಿ ಚುನಾವಣೆ ಯಶಸ್ವಿಯಾಗಿ ನಡೆದಿದ್ದಕ್ಕೆ ಕೇಂದ್ರ ಸರ್ಕಾರವನ್ನು ಶ್ಲಾಘಿಸಿದ್ದರು. ಅವರ ಈ ಹೇಳಿಕೆಯನ್ನು ಕಾಂಗ್ರೆಸ್ ಸಕಾರಾತ್ಮಕವಾಗಿ ನೋಡಬೇಕೇ ಹೊರತು ಅವರನ್ನು ಜಿ-23ರ ಗುಂಪಿಗೆ ಸೇರಿಸಬಾರದು ಎಂದು ಹೇಳಿ ವ್ಯಂಗ್ಯವಾಡಿದ್ದರು. ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಸುಧಾರಣೆ ಕೋರಿ ಪತ್ರ ಬರೆದು 23 ನಾಯಕರು ಬಂಡಾಯ ಎದ್ದಿದ್ದನ್ನು ಪರೋಕ್ಷವಾಗಿ ಮೋದಿ ಉಲ್ಲೇಖಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *