– ಸಿದ್ದರಾಮಯ್ಯಗೆ ಪುಗ್ಸಟ್ಟೆ ಸಲಹೆ ಕೊಡಲ್ಲ
ಉಡುಪಿ: ಸಿದ್ದರಾಮಯ್ಯನಿಗೆ ಗೋವಿನ ಶಾಪವಿದೆ. ಶಾಪ ನಿವಾರಣೆಗೆ ಸಲಹೆ ಕೊಡಬಹುದಿತ್ತು. ಆದರೆ ಅವರು ಯಾರ ಮಾತನ್ನು ಕೇಳ್ತಾರೆ ಹೇಳಿ? ಅವರಿಗೆ ಪುಕ್ಸಟ್ಟೆ ಸಲಹೆ ಕೊಡಲೇನು? ಅಂತ ಸಚಿವ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವಕಾಶವಾದಿ ರಾಜಕಾರಣಿ. ಅಧಿಕಾರ ಸಿಗದಿದ್ದರೆ ಪಕ್ಷ ತೊರೆದು ಬೇರೆ ಪಕ್ಷ ಕಟ್ಟುತ್ತಾರೆ. ಗೋವು ರಕ್ಷಣೆ ಬಗ್ಗೆ ಮೇಲ್ಮನೆ ವಿಪಕ್ಷ ನಾಯಕರಾಗಿದ್ದಾಗ ನಾನು ಹಲವು ಸಲಹೆ ಕೊಟ್ಟಿದ್ದೆ. ನನ್ನ ಮಾತನ್ನು ಕಿವಿಗೆ ಹಾಕಿಕೊಂಡಿಲ್ಲ. ಗೋ ಹತ್ಯೆ, ಗೋಕಳ್ಳತನ ತಡೆಯುವ ಯಾವ ಕ್ರಮ ಕೈಗೊಳ್ಳುತ್ತೀರಿ ಎಂದು ಕೇಳಿದ್ದಕ್ಕೆ ನೀವು ಕೋಮುವಾದಿಗಳು ನಿಮ್ಮ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದರು.

ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಗೋಶಾಪ ಇದೆ. ಸಿದ್ದರಾಮಯ್ಯ ಗೋಮಾಂಸ ತಿಂತೇನೆ ಎಂದರೂ ಕಾಂಗ್ರೆಸ್ಸಿನವರು ವಿರೋಧಿಸುವುದಿಲ್ಲ. ಪಾಕಿಸ್ತಾನ ಜಿಂದಾಬಾದ್ ಅಂದವರ ವಿರುದ್ಧವೂ ಕಾಂಗ್ರೆಸ್ಸಿನವರು ಮಾತನಾಡುವುದಿಲ್ಲ. ಅವರು ಮೊದಲು ಮನಸ್ಥಿತಿ ಬದಲಾವಣೆ ಮಾಡಿಕೊಳ್ಳಬೇಕು. ಪಾಕಿಸ್ತಾನ ಪರ ಘೋಷಣೆ ಕೂಗಿದವರು ಸೊಕ್ಕು ಮುರಿಯುತ್ತೇವೆ. ಇಂತಹ ದೇಶದ್ರೋಹಿ ಚಟುವಟಿಕೆಯನ್ನು ವಿರೋಧ ಮಾಡುವ ಶಕ್ತಿ ಕಾಂಗ್ರೆಸ್ಸಿಗೆ ಇಲ್ಲವಾಗಿದೆ ಎಂದು ಗುಡುಗಿದರು.

ದೇಶದಲ್ಲಿರುವ ಎಲ್ಲ ಮುಸಲ್ಮಾನರು ರಾಷ್ಟ್ರದ್ರೋಹಿಗಳಲ್ಲ. ನಾನು ಇವತ್ತೂ ಹೇಳುತ್ತಿದ್ದೇನೆ, ದೇಶದ್ರೋಹಿಗಳ ಮತ ನಮ್ಮ ಪಕ್ಷಕ್ಕೆ ಬೇಡ. ಕಾಂಗ್ರೆಸ್ ಇದೇ ಮನಸ್ಥಿತಿಯಲ್ಲಿದ್ದಾರೆ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯ್ತಿಯನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಈಶ್ವರಪ್ಪ ಹೇಳಿದರು.


