ನವದೆಹಲಿ: 2021ರ ಕೇಂದ್ರ ಬಜೆಟ್ ಮಂಡಿಸುತ್ತಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪಶ್ಚಿಮ ಬಂಗಾಳದಲ್ಲಿ 6,500 ಕಿಲೋ ಮೀಟರ್ ಉದ್ದದ ಹೆದ್ದಾರಿ ನಿರ್ಮಿಸುವ ಗುರಿಯನ್ನ ಸರ್ಕಾರ ಹೊಂದಿದೆ ಎಂದು ತಿಳಿಸಿದರು.
ಭಾರತಮಾಲಾ ಯೋಜನೆ ಅಡಿಯಲ್ಲಿ ಮೂರು ಸಾವಿರಕ್ಕೂ ಅಧಿಕ ಕಿಲೋ ಮೀಟರ್ ರಸ್ತೆ ನಿರ್ಮಾಣವಾಗಿದೆ. ಮಾರ್ಚ್ ನೊಳಗೆ 8 ಸಾವಿರ ಕಿಲೋ ಮೀಟರ್ ಗುರಿ ತಲುಪಲಾಗುವುದು. ಹೆದ್ದಾರಿಗಳಲ್ಲಿ ಮೂಲ ಸೌಕರ್ಯ ಮತ್ತು ಇಕಾನಾಮಿಕ್ ಕಾರಿಡರ್ ಮೇಲೆ ಸರ್ಕಾರ ಕೆಲಸ ಮಾಡುತ್ತಿದೆ. ತಮಿಳುನಾಡಿನಲ್ಲಿ 3,500 ಕಿಲೋ ಮೀಟರ್ ಉದ್ದದ ರಸ್ತೆ ನಿರ್ಮಿಸಲಾಗುತ್ತಿದ್ದು, ಇದರಲ್ಲಿ ಮಧುರೈ-ಕೊಲ್ಲಂ ಕಾರಿಡರ್ ಒಳಗೊಂಡಿದೆ ಎಂದು ಸೀತಾರಾಮನ್ ಮಾಹಿತಿ ನೀಡಿದರು.
ಕೇರಳದಲ್ಲಿ 1,100 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿದ್ದು, ಇದಕ್ಕಾಗಿ 65 ಸಾವಿರ ಕೋಟಿ ಖರ್ಚು ಆಗಲಿದೆ. ಮುಂಬೈ-ಕನ್ಯಾಕುಮಾರಿ ಕಾರಿಡರ್ ಇದರ ಭಾಗವಾಗಲಿದೆ. ಪಶ್ಚಿಮ ಬಂಗಾಳದಲ್ಲಿ 6,500 ಕಿಲೋ ಮೀಟರ್ ಹೆದ್ದಾರಿ ನಿರ್ಮಿಸುವ ಗುರಿಯನ್ನ ಸರ್ಕಾರ ಹೊಂದಿದ್ದು, ಇದಕ್ಕಾಗಿ 25 ಸಾವಿರ ಕೋಟಿ ಅನುದಾನ ಮೀಸಲು ಇರಿಸಲಾಗುವುದು. ಇದೇ ಅನುದಾನದಲ್ಲಿ ಕೋಲ್ಕತ್ತಾ-ಸಿಲ್ಲಿಗುಡಿ ರಸ್ತೆಯ ರಿಪೇರಿ ಆಗಲಿದೆ ಎಂದರು.
ರೈಲ್ವೆ ಡೆಡಿಕೇಟೆಡ್ ಫ್ರಂಟ್ ಕಾರಿಡಾರ್, ಎನ್ಎಚ್ಎಐನ ಟೋಲ್ ರಸ್ತೆ, ವಿಮಾನ ನಿಲ್ದಾಣ ಮಾರ್ಗ ಸೇರಿದಂತೆ ಇತರ ಆದಾಯವನ್ನು ಅಸೆಟ್ ಮ್ಯಾನೇಜ್ಮೆಂಟ್ ಅಡಿಯಲ್ಲಿ ತರಲಾಗುವುದು ಎಂದು ಸೀತಾರಾಮನ್ ಹೇಳಿದರು.
ರಾಷ್ಟ್ರೀಯ ರೈಲ್ವೇ ಪ್ಲಾನ್-2030 ಸಿದ್ಧಪಡಿಸಲಾಗಿದ್ದು, ಭವಿಷ್ಯದ ರೈಲ್ವೇ ಸಿಸ್ಟಂ ನಿರ್ಮಿಸುವ ಗುರಿಯನ್ನ ಸರ್ಕಾರ ಹೊಂದಿದೆ. ಈ ಗುರಿಯಲ್ಲಿ ಮೇಕ್ ಇನ್ ಇಂಡಿಯಾಗೆ ಪ್ರಾಮುಖ್ಯತೆ ನೀಡಲಾಗುವುದು. ವೆಸ್ಟರ್ನ್ ಮತ್ತು ಈಸ್ಟರ್ನ್ ಫ್ರೆಟ್ ಕಾರಿಡರ್ ಜೂನ್, 2022ರೊಳಗೆ ಪೂರ್ಣಗೊಳಿಸೋದಾಗಿ ತಿಳಿಸಿದರು, ಸೋನ ನಗರ-ಗೋಮೋ ಸೆಕ್ಷನ್ ಪಿಪಿಪಿ (ಸರ್ಕಾರ-ಖಾಸಗಿ ಸಹಭಾಗಿತ್ವ) ಮೋಡ್ ನಲ್ಲಿ ಮಾಡಲಾಗುವುದು.