ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಉಗ್ರ ಚಟುವಟಿಕೆಗಳು ಸಕ್ರಿಯವಾಗಿದ್ದು, ದಕ್ಷಿಣ ಭಾರತವನ್ನು ಕೇಂದ್ರೀಕರಿಸಿ ಉಗ್ರರು ಪಶ್ಚಿಮಘಟ್ಟಗಳಲ್ಲಿ ತಂಗುತ್ತಿದ್ದಾರೆ ಎಂದು ಶಾಸಕ ಕೆ.ಜಿ.ಬೋಪಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.
ಮಡಿಕೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈ ಹಿಂದೆಯೇ ಉಗ್ರರ ಚಟುವಟಿಕೆ ಕುರಿತು ಸುಳಿವಿತ್ತು. ದಕ್ಷಿಣ ಭಾರತದ ಹಲವೆಡೆ ದಾಳಿ ನಡೆಸುವ ಸಂಚು ರೂಪಿಸಿದ್ದರು. ಆದರೆ ಈಗ ಎನ್ಐಎ ಅದನ್ನು ಸ್ಪಷ್ಟಪಡಿಸಿದೆ. ಹಿಂದೆಯೂ ಅಬ್ದುಲ್ ಮದನಿ ಎಂಬ ಉಗ್ರ ಕೊಡಗಿನ ಹೊಸ ತೋಟದಲ್ಲಿ ನೆಲೆಸಿದ್ದ. ಇದೆಲ್ಲವೂ ಪಶ್ಚಿಮಘಟ್ಟ ಉಗ್ರರ ತಾಣವಾಗುತ್ತಿದೆ ಎಂಬುದು ಸ್ಪಷ್ಟ. ಎನ್ಐಎ ಕೂಡಲೆ ಕಾರ್ಯಪ್ರವೃತ್ತರಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕೊಡಗಿನ ಕಾಫಿ ಬೆಳೆಗಾರರು ಅಸ್ಸಾಂ ಕಾರ್ಮಿಕರನ್ನು ಕರೆತರುತಿದ್ದಾರೆ. ಅಸ್ಸಾಂ ಕಾರ್ಮಿಕರ ಹೆಸರಿನಲ್ಲಿ ಬಾಂಗ್ಲಾ ದೇಶಿಗರು ಕೊಡಗಿನಲ್ಲಿ ನೆಲೆಸುತಿದ್ದಾರೆ. ಅಸ್ಸಾಂ ಕಾರ್ಮಿಕರನ್ನು ವಿಳಾಸ ಸಹಿತ ದಾಖಲಿಸಿಕೊಳ್ಳಬೇಕು. ಆದರೆ ಪೊಲೀಸ್ ಠಾಣೆಗಳಲ್ಲಿ ಆ ಕೆಲಸ ಆಗುತ್ತಿಲ್ಲ. ಪ್ರವಾಸಿಗರ ರೂಪದಲ್ಲಿ ಜಿಲ್ಲೆಗೆ ಯಾರೆಲ್ಲಾ ಬರುತ್ತಿದ್ದಾರೆ ಎಂಬುದನ್ನು ಅರಿಯಲು ಚೆಕ್ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಅಗತ್ಯವಿದೆ ಎಂದು ಕೆ.ಜಿ.ಬೋಪಯ್ಯ ತಿಳಿಸಿದ್ದಾರೆ.