– ಸಚಿವ ಸ್ಥಾನಕ್ಕೆ ಸಿ.ಟಿ.ರವಿ ರಾಜೀನಾಮೆ ಅನುಮಾನ?
ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸಚಿವ ಸಿಟಿ ರವಿ ಅವರಿಗೆ ಪ್ರಮೋಷನ್ ಲಭಿಸಿದ್ದು, ಈ ನಡುವೆಯೇ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎನ್ನಲಾಗಿತ್ತು. ಆದರೆ ಸದ್ಯ ಸಿಟಿ ರವಿ ಅವರು ನೀಡಿರುವ ಹೇಳಿಕೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದು ಅನುಮಾನ ಮೂಡಿದೆ.
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಕುರಿತು ಪ್ರತಿಕ್ರಿಯೆ ನೀಡಿರುವ ಸಿ.ಟಿ.ರವಿ ಅವರು, ನಮ್ಮಲ್ಲಿ ಒಬ್ಬರಿಗೆ ಒಂದು ಸ್ಥಾನ ಎಂಬ ಅಲಿಖಿತ ನಿಯಮವಿದೆ. ಇದೇ ರೀತಿ 75 ವರ್ಷ ದಾಟಿದವರು ಅಧಿಕಾರ, ರಾಜಕೀಯದಿಂದ ನಿವೃತ್ತಿ ಹೊಂದಬೇಕೆಂಬ ನಿಯಮವೂ ಇದೆ. ಆದರೆ ಕೆಲವೊಮ್ಮೆ ವರಿಷ್ಠರೇ ಅಲಿಖಿತ ನಿಯಮಗಳನ್ನು ಬದಲಾವಣೆ ಮಾಡಿದ್ದಾರೆ ಎಂದು ಪರೋಕ್ಷವಾಗಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಟಾಂಗ್ ನೀಡಿದರು.
ಅಲಿಖಿತ ನಿಯಮಗಳನ್ನು ಬದಲಾಯಿಸಿದ್ದು, ಪಕ್ಷದ ವರಿಷ್ಠ ಮಂಡಳಿಯ ನಿರ್ಧಾರ. ಆದರೆ ಬಿಜೆಪಿ ಪಕ್ಷದ ಕಾರ್ಯಕರ್ತನಾಗಿ ಹಾಗೂ ವ್ಯಕ್ತಿಗತ ಆಯ್ಕೆಯಂತೆ ನನಗೆ ಸಂಘಟನೆಯೇ ಮುಖ್ಯ ಎಂದು ಸ್ಪಷ್ಟಪಡಿಸಿದರು. ಈ ಹಿಂದೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಕುರಿತು ಮಾತನಾಡಿದ್ದ ಸಿಟಿ ರವಿ ಅವರು, ಪಕ್ಷವೋ, ಸರ್ಕಾರವೋ ಎಂದು ಕೇಳಿದಾಗ ನಾನು ಪಕ್ಷಕ್ಕೆ ಪ್ರಾಮುಖ್ಯತೆ ನೀಡುತ್ತೇನೆ. ರಾಷ್ಟ್ರೀಯ ರಾಜಕಾರಣಕ್ಕೆ ತೆರಳಿದರೂ ನಮ್ಮ ಬೇರುಗಳು ಇಲ್ಲೇ ಇದೆ. ಪಕ್ಷ ವರಿಷ್ಠರು ಯಾವಾಗ ರಾಜೀನಾಮೆಗೆ ಸೂಚಿಸುತ್ತಾರೋ ಅಂದೇ ರಾಜೀನಾಮೆ ನೀಡುತ್ತೇನೆ. ಪಕ್ಷ ಕೊಟ್ಟ ಜವಾಬ್ದಾರಿಯನ್ನು ಮುಂದುವರಿಸುತ್ತೇನೆ ಎಂದರು. ಇನ್ನು ನಿನ್ನೆ ನಡೆದ ಸಂಪುಟಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಪ್ರಮೋಷನ್ ಪಡೆದ ಸಚಿವ ಸಿಟಿ ರವಿ ಅವರಿಗೆ ಸಚಿವ ಸಂಪುಟ ಸಭೆಯಲ್ಲಿ ಅಭಿನಂದನೆ ತಿಳಿಸಿದ್ದರು.
ಇದೇ ವೇಳೆ ಉತ್ತರಪ್ರದೇಶದಲ್ಲಿ ನಡೆದ ಅತ್ಯಾಚಾರದ ಘಟನೆಯನ್ನು ಖಂಡಿಸಿದ ಸಿಟಿ ರವಿ ಅವರು, ಅತ್ಯಾಚಾರಿಗಳ ಮೇಲೆ ಕಠಿಣ ಕ್ರಮವನ್ನು ಕೈಗೊಳ್ಳಬೇಕು. ಆದರೆ ಇದನ್ನು ರಾಜಕೀಯ ದುರ್ಬಳಕೆ ಮಾಡಿಕೊಳ್ಳುವ ಮನೋಭಾವನೆ ಸರಿಯಲ್ಲ. ಕಾಂಗ್ರೆಸ್ ನದ್ದು ದನ ಸತ್ತರೆ ರಣಹದ್ದುಗಳು ಕಾಯುವ ರೀತಿಯ ಮನಸ್ಥಿತಿ. ರಾಹುಲ್ ಗಾಂಧಿ ಸಾಂತ್ವನ ಹೇಳೋದಕ್ಕೆ ಹೊರಟಿರಲಿಲ್ಲ. ಬದಲಾಗಿ ಪ್ರದರ್ಶನ ಮಾಡೋದಕ್ಕೆ ಮಾಡಲು ಹೊರಟಿದ್ದರು. ಪ್ರದರ್ಶನದ ಮೂಲಕ ಸಾಂತ್ವನ ಹೇಳೋದಲ್ಲ ಎಂದು ಟಾಂಗ್ ನೀಡಿದರು.