ಬಳ್ಳಾರಿ: ಕೊರೊನಾ ಭೀತಿ ಮಧ್ಯೆ ಸಗಣಿ ಜಾತ್ರೆಯಲ್ಲಿ ಭಕ್ತರು ಪರಸ್ಪರ ಸಗಣಿಯಲ್ಲಿ ಬಡಿದಾಟವಾಡಿಕೊಂಡು ವಿಶೇಷ ಆಚರಣೆಯನ್ನು ಮಾಡಿದ್ದಾರೆ.
ಆಂಧ್ರದ ಕೈರಪ್ಪಾಲ ಗ್ರಾಮದಲ್ಲಿ ನಡೆಯುವ ಈ ವಿಶೇಷ ಆಚರಣೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದಾರೆ. ಪರಸ್ಪರ ಸೆಗಣಿ ಎರಚುವ ವಿಶೇಷ ಆಚರಣೆ ಇದಾಗಿದೆ. ವೀರಭದ್ರೇಶ್ವರ ಮತ್ತು ಭದ್ರಕಾಳಿ ಭಕ್ತರ ಮಧ್ಯೆ ನಡೆಯೋ ಕಾಳಗ ಇದಾಗಿದೆ ಎಂದು ಹೇಳಲಾಗುತ್ತದೆ.
ಮೇಲ್ನೋಟಕ್ಕೆ ಸೆಗಣಿ ಎರಚಾಡಿದ್ರು ಒಳಗೊಳಗೆ ಕೆಲ ಭಕ್ತರು ಅಸ್ತ್ರ ಪ್ರಯೋಗ ಕೂಡ ಮಾಡ್ತಾರಂತೆ. ಯುಗಾದಿ ಹಬ್ಬದ ನಂತರದ ಕರಿಹಬ್ಬದ ದಿನ ನಡೆಯುವ ಕಾಳಗ ನೋಡಲು ಕರ್ನಾಟಕ ಆಂಧ್ರ, ತೆಲಂಗಾಣ ಸೇರಿದಂತೆ ತಮಿಳುನಾಡಿನ ಜನರು ಬರುತ್ತಾರೆ.
ತಲತಲಾಂತರದ ಹಿಂದೆ ವೀರಭದ್ರೇಶ್ವರ ಸ್ವಾಮಿ ಯುಗಾದಿ ಹಬ್ಬದ ಮಾರನೇ ದಿನವಿಹಾರ ಮುಗಿಸಿ ಬರುವಾಗ ಭದ್ರಕಾಳಿ ಭಕ್ತರು ಸೆಗಣಿ ಎರಚಿದ್ದರಂತೆ. ಇದಕ್ಕೆ ಪ್ರತಿಯಾಗಿ ವೀರಭದ್ರೇಶ್ವರ ಭಕ್ತರು ಕೂಡ ಸೆಗಣಿ ಎರಚುತ್ತಾರೆ. ಇದೊಂದು ಪಾರಂಪರಿಕ ಹಬ್ಬವಾಗಿದ್ದು, ಪ್ರತಿವರ್ಷ ಹೀಗೆ ನಡೆದುಕೊಂಡು ಬಂದಿದೆ. ಈ ಆಚರಣೆ ವೇಳೆ ಗಲಾಟೆಯಾಗೋದು ಸಹಜ. ಈ ವರ್ಷ ಅರವತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕೊರೊನಾ ವೇಳೆ ಸಾವಿರಾರು ಜನರು ಸೇರಿ ಈ ಹಬ್ಬ ಆಚರಣೆ ಮಾಡೋದು ಬೇಕಿತ್ತಾ ಎಂದು ಸ್ಥಳೀಯರು ಆಡಳಿತವನ್ನು ಪ್ರಶ್ನೆ ಮಾಡಿದ್ದಾರೆ.