ಬೆಂಗಳೂರು: ಖಾಸಗಿ ಆಸ್ಪತ್ರೆಗಳ ರೀತಿಯಲ್ಲೇ ಖಾಸಗಿ ಅಂಬುಲೆನ್ಸ್ಗಳಿಗೂ ದರ ನಿಗದಿ ಮಾಡುವ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೇನೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರು ಹೇಳಿದ್ದಾರೆ.
ಕೊರೊನಾ ಬೆಂಗಳೂರಿನಲ್ಲಿ ರಣಕೇಕೆ ಹಾಕುತ್ತಿದೆ. ಬೆಡ್ ಸಿಗದೇ ಸರಿಯಾದ ಸಮಯಕ್ಕೆ ಅಂಬುಲೆನ್ಸ್ ಬಾರದೇ ರೋಗಿಗಳು ಸಾಯುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಅಂಬುಲೆನ್ಸ್ ಏಜೆನ್ಸಿಗಳು ದುಡ್ಡು ಮಾಡುವ ದಂಧೆ ಮಾಡುತ್ತೀವೆ ಎಂದು ಬೆಳಗ್ಗೆ ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ನಡೆಸಿ ವರದಿ ಮಾಡಿತ್ತು. ಇದನ್ನೂ ಓದಿ: ಕೊರೊನಾ ಹೆಸರಲ್ಲಿ ದುಡ್ಡಿನ ದಂಧೆಗೆ ಇಳಿದ ಖಾಸಗಿ ಅಂಬುಲೆನ್ಸ್ ಏಜೆನ್ಸಿ
ಈಗ ಈ ವಿಚಾರದ ಬಗ್ಗೆ ವಿಧಾನ ಸೌಧದಲ್ಲಿ ಮಾತನಾಡಿರುವ ಶ್ರೀರಾಮುಲು, ಖಾಸಗಿ ಆಂಬ್ಯುಲೆನ್ಸ್ ಗಳು ಹೆಚ್ಚು ಹಣ ವಸೂಲಿ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಖಾಸಗಿ ಆಸ್ಪತ್ರೆಗಳು ಹೆಚ್ಚು ಹಣ ವಸೂಲಿ ಮಾಡೋವಾಗ ಸರ್ಕಾರ ಮಧ್ಯೆ ಪ್ರವೇಶ ಮಾಡಿ ಅದಕ್ಕೆ ಪಾಲಿಸಿ ತಂದಿತ್ತು. ಈಗ ಅಂಬುಲೆನ್ಸ್ ವಿಚಾರವಾಗಿ ಪಾಲಿಸಿ ತರುತ್ತೇವೆ. ಸಿಎಂ ಯಡಿಯೂರಪ್ಪ ಅವರ ಜೊತೆ ಈ ಬಗ್ಗೆ ಚರ್ಚೆ ಮಾಡಿ ಇದಕ್ಕೆ ಒಂದು ಪಾಲಿಸಿ ಜಾರಿಗೆ ತರುತ್ತೇವೆ. ಜನರಿಗೆ ಅನುಕೂಲವಾಗುವಂತೆ ಮಾಡಿಕೊಡುತ್ತೇವೆ ಎಂದು ತಿಳಿಸಿದ್ದಾರೆ.