ಮೈಸೂರು: ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಎಸ್ಎಸ್ಎಲ್ಸಿ ಮಕ್ಕಳ ಭವಿಷ್ಯವನ್ನು ಬೆಳಕಾಗಿಸುವ ಜ್ಞಾನದೀವಿಗೆ ಕಾರ್ಯಕ್ರಮದ ಭಾಗವಾಗಿ ಮೈಸೂರು ತಾಲೂಕಿನ ವರುಣಾದಲ್ಲಿನ ಸರ್ಕಾರಿ ಪ್ರೌಢಶಾಲೆಯ 136 ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಲಾಯಿತು.
ಬಡ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ ವಿತರಿಸುವ ಜ್ಷಾನದೀವಿಗೆ ಮಹಾ ಅಭಿಯಾನವನ್ನು ನಿಮ್ಮ ಪಬ್ಲಿಕ್ ಟಿವಿ ರೋಟರಿ ಇಂಟರ್ ನ್ಯಾಷನಲ್ ಸಂಸ್ಥೆಯ ಸಹಯೋಗದಲ್ಲಿ ಆರಂಭಿಸಿದೆ. ಇದಕ್ಕೆ ನೂರಾರು ದಾನಿಗಳು ದೇಣಿಗೆ ನೀಡುತ್ತಿದ್ದಾರೆ. ಸಿಎಂ ಯಡಿಯೂರಪ್ಪ ಅವರ ಪುತ್ರ ಬಿ.ಎಸ್. ವಿಜಯೇಂದ್ರ ಅವರು ಕೂಡ ದೇಣಿಗೆ ನೀಡಿದ್ದಾರೆ. ಅವರ ಇಚ್ಛೆಯಂತೆ ನಿನ್ನೆ ವರುಣಾದ ಸರ್ಕಾರಿ ಪ್ರೌಢಶಾಲೆಯಲ್ಲಿ 136 ಮಕ್ಕಳಿಗೆ ಟ್ಯಾಬ್ ವಿತರಿಸಲಾಯಿತು.
ವರುಣಾದಲ್ಲಿನ ಸರಕಾರಿ ಪ್ರೌಢಶಾಲೆಯ 136 ಮಕ್ಕಳಿಗೆ ಟ್ಯಾಬ್ ನೀಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಟ್ಯಾಬ್ ವಿತರಿಸಿದರು. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೌಟಿಲ್ಯ ರಘು, ರೋಟರಿ ಮೈಸೂರು ಅಧ್ಯಕ್ಷ ಎಸ್. ಮಂಜೇಶ್ ಕುಮಾರ್ ಮುರುಗೇಶ್ ಈ ವೇಳೆ ಉಪಸ್ಥಿತರಿದ್ದರು.
ಒಟ್ಟಿನಲ್ಲಿ ಮಕ್ಕಳ ಬಾಳು ಬೆಳಗಲು ಶುರುವಾದ ಈ ಮಹಾಯಜ್ಞಕ್ಕೆ ಸರ್ಕಾರದ ಸಹಕಾರ, ರೋಟರಿ ಸಹಯೋಗ, ದಾನಿಗಳ ನೆರವಿನಿಂದ ಈ ಜ್ಞಾನದೀವಿಗೆ ದೊಡ್ಡ ಬೆಳಕಾಗಿ ಹೊರ ಹೊಮ್ಮುತ್ತಿದೆ. ಈ ಮ್ಯಾರಥಾನ್ ಅಭಿಯಾನದಲ್ಲಿ ನೀವು ಕೈಜೋಡಿಸಬಹುದು. ಮಕ್ಕಳ ಭವಿಷ್ಯ ಬೆಳಗಿಸುವ ಸಂಕಲ್ಪದೊಂದಿಗೆ ನಿಮ್ಮ ಕೈಲಾದಷ್ಟು ದೇಣಿಗೆ ನೀಡಬಹುದು. ಒಂದು ಟ್ಯಾಬ್ ದರ 3495 ರೂಪಾಯಿ. ಬನ್ನಿ ಸಹಾಯ ಮಾಡೋಣ. ನೀವು ಕೈಜೋಡಿಸಿದರೆ ಯಾವುದೂ ಅಸಾಧ್ಯವಲ್ಲ.