– ಸಾವಿನಲ್ಲೂ ಒಂದಾದ ವೃದ್ಧ ದಂಪತಿ
ಬಳ್ಳಾರಿ: ವೃದ್ಧ ದಂಪತಿ ಒಂದೇ ದಿನ ಮೃತಪಡುವ ಮೂಲಕ ಸಾವಿನಲ್ಲೂ ಒಂದಾದ ಘಟನೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಹೊಸಹಳ್ಳಿ ಸಮೀಪದ ಕಂಚೋಬನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ವೃದ್ಧರನ್ನು ಹೊಸಮನಿ ಲಕ್ಷ್ಮೀದೇವಿ(70) ಮತ್ತು ಹೊಸಮನಿ ಮಹಾದೇವಪ್ಪ(75) ಎಂದು ಗುರುತಿಸಲಾಗಿದೆ. ವೃದ್ಧ ದಂಪತಿ ಕಂಚೋಬನಹಳ್ಳಿ ನಿವಾಸಿಗಳಾಗಿದ್ದಾರೆ.
ಲಕ್ಷ್ಮೀದೇವಿ ವಯೋ ಸಹಜ ಕಾಯಿಲೆಯಿಂದ ಬಳಲುತಿದ್ದರು. ಇಂದು ಬೆಳಗ್ಗಿನ ಜಾವ ನಾಲ್ಕು ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ಪತ್ನಿ ಸಾವಿನಿಂದ ಮಾನಸಿಕವಾಗಿ ನೊಂದ ಹೊಸಮನಿ ಮಹಾದೇವಪ್ಪ ಕೂಡ ಹೃದಯಾಘಾತವಾಗಿ 9 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ.
ದಂಪತಿ ಸಾವಿನ ಯಾತ್ರೆಯಲ್ಲೂ ಜೊತೆಯಾಗಿರುವುದು ನೋಡುಗರ ಕಣ್ಣು ಒದ್ದೆ ಮಾಡಿತ್ತು. ಮೃತರ ಅಂತ್ಯಕ್ರಿಯೆಯನ್ನು ಗ್ರಾಮದ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು. ಮೃತ ವೃದ್ಧ ದಂಪತಿ ಪುತ್ರ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.