– ಒಂದೇ ಕುಟುಂಬದ ನಾಲ್ವರು ಸಾವು
– ಮಕ್ಕಳನ್ನ ಕರ್ಕೊಂಡು ಹೋಗಿ ಬಾವಿಗೆ ಹಾರಿದ ತಾಯಿ
ಹೈದರಾಬಾದ್: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ.
ಪತಿ ಸುಧಾಕರ್ (35), ಸಿಂಧು ಪ್ರಿಯಾ (25) ಮತ್ತು ಮಕ್ಕಳಾದ ಲತಾ (7) ಮತ್ತು ಮಧು ಪ್ರಿಯಾ (5) ಮೃತ ಒಂದೇ ಕಟುಂಬದ ನಾಲ್ವರು. ಮೃತ ಪತಿ ಮತ್ತು ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಜೊತೆಗೆ ಕೌಟುಂಬಿಕ ಸಮಸ್ಯೆಗಳಿಂದ ಆತ್ಮಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಏನಿದು ಪ್ರಕರಣ?
ಮೃತ ಸುಧಾಕರ್ ತನ್ನ ಸಂಬಂಧಿಯಾದ ಸಿಂಧು ಪ್ರಿಯಾಳನ್ನು 10 ವರ್ಷಗಳ ಹಿಂದೆ ವಿವಾಹವಾಗಿದ್ದನು. ಈ ದಂಪತಿಗೆ ಲತಾ ಮತ್ತು ಮಧು ಪ್ರಿಯಾ ಇಬ್ಬರು ಮಕ್ಕಳಿದ್ದರು. ಈ ದಂಪತಿಯ ಮಧ್ಯೆ ಆಗಾಗ ಚಿಕ್ಕ-ಪುಟ್ಟ ವಿಚಾರಗಳಿಗೂ ಜಗಳ ನಡೆಯುತ್ತಿತ್ತು. ಸೋಮವಾರ ಬೆಳಗ್ಗೆ ಕೂಡ ದಂಪತಿ ಜೋರಾಗಿ ಜಗಳವಾಡಿದ್ದಾರೆ. ಆಗ ಕೋಪಕೊಂಡ ಸುಧಾಕರ್ ಮನೆಯಿಂದ ಹೊರ ಹೋಗಿದ್ದನು.
ಇತ್ತ ಸಿಂಧು ತನ್ನ ಇಬ್ಬರು ಪುತ್ರಿಯರನ್ನು ಕರೆದುಕೊಂಡು ಮನೆಯ ಸಮೀಪ ಜಮೀನಿನಲ್ಲಿದ್ದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜಗಳದ ನಂತರ ಮನೆಯಿಂದ ಹೊರಹೋಗಿದ್ದ ಸುಧಾಕರ್ ಸ್ವಲ್ಪ ಸಮಯದ ನಂತರ ಮನೆಗೆ ಬಂದು ಹೆಂಡತಿ ಮತ್ತು ಮಕ್ಕಳನ್ನು ಹುಡುಕಿದ್ದಾನೆ. ಆದರೆ ಎಲ್ಲೂ ಪತ್ತೆಯಾಗಿಲ್ಲ. ಕೊನೆಗೆ ಬಾವಿಯಲ್ಲಿ ಮೃತದೇಹವನ್ನು ಕಂಡು ಆಘಾತಗೊಂಡಿದ್ದಾನೆ.
ಮೃತ ಪತ್ನಿ, ಮಕ್ಕಳನ್ನು ನೋಡಿ ಸಹಿಸಲಾಗದೆ ಸುಧಾಕರ್ ಕೂಡ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸುಧಾಕರ್ ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ನೋಡಿದ ಗ್ರಾಮಸ್ಥರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಬಂದು ಪೊಲೀಸರು ಪತ್ನಿ, ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದು ತಿಳಿದು ಬಂದಿದೆ. ನಂತರ ಎಲ್ಲರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಿದ್ದಾರೆ. ನಂತರ ಡಿಎಸ್ಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.