ಕಲಬುರಗಿ: ಪತ್ನಿ ವಿಚಾರದಲ್ಲಿ ಅತ್ತೆ ಹಾಗೂ ಅಳಿಯನ ಮಧ್ಯೆ ಗಲಾಟೆ ನಡೆದಿದ್ದು, ಮಗಳನ್ನು ಕಳುಹಿಸಲು ಬಂದಿದ್ದ ಅತ್ತೆಯ ಮೇಲೆಯೇ ಕಲ್ಲು ಎತ್ತಿ ಹಾಕಿ ಅಳಿಯ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.
ಜಿಲ್ಲೆಯ ಕಮಲಾಪುರ ತಾಲೂಕಿನ ಭೀಮನಾಳ ಗ್ರಾಮದಲ್ಲಿ ಘಟನೆ ನಡೆದಿದ್ದು, ಲಕ್ಷ್ಮಿಬಾಯಿ(45) ಕೊಲೆಯಾದ ಮಹಿಳೆ. ಆರೋಪಿ ರಾಮು(55) ಅತ್ತೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ವಿಕೃತಿ ಮೆರೆದಿದ್ದಾನೆ.
ಈ ಹಿಂದೆ ಪತಿ, ಪತ್ನಿ ಮಧ್ಯೆ ಜಗಳವಾಗೊತ್ತು. ಹೀಗಾಗಿ ಪತ್ನಿ ತವರು ಮನೆ ಸೇರಿದ್ದಳು. ಇದೀಗ ಅಳಿಯನ ಬಳಿ ಮಾತನಾಡಿ, ಜಗಳ ಬಗೆ ಹರಿಸಿ ಬರುತ್ತೇನೆ ಎಂದು ಮಗಳನ್ನು ಗಂಡನ ಮನೆಗೆ ಕರೆ ತಂದಿದ್ದಳು. ಇಬ್ಬರ ಜಗಳ ಬಗೆಹರಿಸಿ, ರಾಜಿ ಮಾಡಿ, ಮಗಳನ್ನು ಬಿಟ್ಟು ಹೋಗಲು ಬಂದಿದ್ದಳು. ಆದರೆ ಈ ವೇಳೆ ಅಳಿಯ ಹಾಗೂ ಅತ್ತೆ ಮಧ್ಯೆ ವಾಗ್ವಾದ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ರಾಮು ತನ್ನ ಅತ್ತೆ ಲಕ್ಷ್ಮಿಬಾಯಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಿಂದ ಭೀಮನಾಳ ಗ್ರಾಮಕ್ಕೆ ಮಗಳನ್ನು ಕಳುಹಿಸಲು ಲಕ್ಷ್ಮಿಬಾಯಿ ಬಂದಿದ್ದಳು. ಈ ವೇಳೆ ದುರ್ಘಟನೆ ಸಂಭವಿಸಿದೆ. ಕೊಲೆ ಮಾಡುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.