ಲಕ್ನೋ: ವ್ಯಕ್ತಿಯೊಬ್ಬ ತನ್ನ ಪತ್ನಿಯ ಶಿರಚ್ಛೇದ ಮಾಡಿ ಬಳಿಕ ಆಕೆಯ ತಲೆಯೊಂದಿಗೆ ಪೊಲೀಸ್ ಠಾಣೆಗೆ ತೆರಳಿ ಶರಣಾದ ಅಚ್ಚರಿಯ ಘಟನೆಯೊಂದು ಉತ್ತರಪ್ರದೇಶದ ಬಾಂಡಾದಲ್ಲಿ ನಡೆದಿದೆ.
ಆರೋಪಿಯನ್ನು ಚಿನ್ನಾರ್ ಯಾದವ್ ಹಾಗೂ ಮೃತ ಪತ್ನಿಯನ್ನು ವಿಮಲ(35) ಎಂದು ಗುರುತಿಸಲಾಗಿದೆ. ಈ ಘಟನೆ ಇಂದು ಬೆಳಗ್ಗೆ 7.30ರ ಸುಮಾರಿಗೆ ನೇತಾನಗರದಲ್ಲಿರುವ ನಿವಾಸದಲ್ಲಿ ನಡೆದಿದೆ. ವ್ಯಕ್ತಿ ತನ್ನ ಪತ್ನಿ ತಲೆಯನ್ನು ಹಿಡಿದುಕೊಂಡು ನಡೆದುಕೊಂಡು ಹೋಗುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಇಂದು ಬೆಳಗ್ಗೆ ಚಿನ್ನಾರ್ ಹಾಗೂ ವಿಮಲ ಮಧ್ಯೆ ಇಂದು ಬೆಳಗ್ಗೆ ಕುಲ್ಲಕ ಕಾರಣಕ್ಕೆ ಜಗಳ ನಡೆದಿದೆ. ಈ ಜಗಳ ತಾರಕಕ್ಕೇರಿದ್ದು, ಕೋಪೋದ್ರಿಕ್ತನಾದ ಪತಿರಾಯ ಹರಿತವಾದ ಆಯುಧದಿಂದ ಪತ್ನಿಯ ತಲೆಯನ್ನು ಕತ್ತರಿಸಿದ್ದಾನೆ. ಬಳಿಕ ತಲೆಯನ್ನು ಹಿಡಿದುಕೊಂಡು ಬಾಬೆರು ಪೊಲೀಸ್ ಠಾಣೆಗೆ ತೆರಳಿ, ಪೊಲೀಸರಿಗೆ ಶರಣಾಗಿದ್ದಾನೆ ಎಂದು ಎಸ್ಪಿ ಮಹೇಂದ್ರ ಪ್ರತಾಪ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
ಆರೋಪಿ ಕತ್ತರಿಸಿದ ತಲೆಯೊಂದಿಗೆ ನಡೆದುಕೊಂಡು ಹೋಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಚಿನ್ನಾರ್ ಯಾದವ್ ನನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಕೃತ್ಯಕ್ಕೆ ಬಳಸಿದ್ದ ಆಯುಧವನ್ನು ವಶಕ್ಕೆ ಪಡೆದಿದ್ದಾರೆ. ಇತ್ತ ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.