– ತ್ರಿಕೋನ ಸಂಬಂಧದಿಂದ ಬಾಲಕಿಯ ಭೀಕರ ಕೊಲೆ
ಹೈದರಬಾದ್: 10 ದಿನಗಳ ಹಿಂದೆ ಐದು ವರ್ಷದ ಬಾಲಕಿಯನ್ನು ತಾಯಿಯ ಗೆಳೆಯನೇ ಕೊಲೆ ಮಾಡಿದ್ದನು. ಇದೀಗ ಮಗಳನ್ನು ಕಳೆದುಕೊಂಡ ನೋವಿನಲ್ಲಿದ್ದ ತಂದೆ 10 ದಿನಗಳ ನಂತರ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಭೊಂಗಿರ್ನಲ್ಲಿ ಚಲಿಸುವ ರೈಲಿನ ಮುಂದೆ ಬಿದ್ದು 37 ವರ್ಷದ ಸರ್ಕಾರಿ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶನಿವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ರೈಲ್ವೆ ಹಳಿ ಬಳಿ ವಾಸಿಸುವ ಕೆಲವೇ ಮಕ್ಕಳು ಮೃತ ದೇಹವನ್ನು ನೋಡಿ ತಮ್ಮ ಪೋಷಕರಿಗೆ ಹೋಗಿ ಹೇಳಿದ್ದಾರೆ. ತಕ್ಷಣ ಅವರು ಭೊಂಗಿರ್ ಪೊಲೀಸರು ಮತ್ತು ಸ್ಥಳೀಯ ರೈಲ್ವೆ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದು, ಮೃತನನ್ನು ಸರ್ಕಾರಿ ನೌಕರನಾಗಿದ್ದ 37 ವರ್ಷದ ವ್ಯಕ್ತಿ ಎಂದು ಗುರುತಿಸಿದ್ದಾರೆ. ತನಿಖೆಯ ಸಮಯದಲ್ಲಿ ಮೃತ ವ್ಯಕ್ತಿ ಘಾಟ್ಕೇಸರ್ ನಿವಾಸಿ ಎಂದು ತಿಳಿದುಬಂದಿದೆ. ಜುಲೈ 1 ರಂದು ಮೃತ ವ್ಯಕ್ತಿಯ ಮಗಳನ್ನು ಆರೋಪಿ ಕರುಣಾಕರ್ ಕೊಲೆ ಮಾಡಿದ್ದನು.
ಆರೋಪಿ ಕರುಣಾಕರ್ ಮೃತ ಮಗುವಿನ ತಾಯಿ ಅಕ್ರಮ ಸಂಬಂಧ ಹೊಂದಿದ್ದಾಳೆ. ಅಲ್ಲದೇ ಆಕೆ ತನ್ನಿಂದ ದೂರವಾಗುತ್ತಿದ್ದಾಳೆ ಎಂದು ಅಸಮಾಧಾನಗೊಂಡು ಮಗುವನ್ನು ಕೊಲೆ ಮಾಡಿದ್ದನು. ಮಗಳ ಸಾವಿನ ನಂತರ ವ್ಯಕ್ತಿಯ ಭೋಂಗಿರ್ ನಲ್ಲಿರುವ ತನ್ನ ಸಹೋದರರ ನಿವಾಸದಲ್ಲಿ ವಾಸಿಸುತ್ತಿದ್ದನು. ಆದರೆ ಮಗಳ ಹತ್ಯೆಯಿಂದ ತುಂಬಾ ನೊಂದಿದ್ದನು. ಕೊನೆಗೆ ಮನನೊಂದು ಮಗಳು ಕೊಲೆಯಾದ 10 ದಿನಗಳ ನಂತರ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾನೆ.
ಏನಿದು ಪ್ರಕರಣ?
2011ರಲ್ಲಿ ಭುವನಗಿರಿ ಮೂಲದ ವ್ಯಕ್ತಿ ಆಂಧ್ರಪ್ರದೇಶದ ಅನಂತಪುರದ ಯುವತಿಯನ್ನು ವಿವಾಹವಾಗಿದ್ದರು. ಈ ದಂಪತಿಗೆ 5 ವರ್ಷದ ಮಗಳಿದ್ದಳು. ಇವರಿಬ್ಬರು ಫೇಸ್ಬುಕ್ ಮೂಲಕ ಪರಿಚಯವಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ನಂತರ ತಮ್ಮ ಪ್ರೀತಿಯ ವಿಚಾರವನ್ನು ಮನೆಯಲ್ಲಿ ಹೇಳಿದ್ದರು. ಮನೆಯವರು ಕೂಡ ಇವರ ಪ್ರೀತಿಯನ್ನು ಒಪ್ಪಿಕೊಂಡು ಮದುವೆ ಮಾಡಿಸಿದ್ದರು. ಮಹಿಳೆಯ ಪತಿ ಭುವನಗಿರಿ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದನು.
ಮಹಿಳೆ ಕೆಲವು ತಿಂಗಳ ಹಿಂದೆ ಫೇಸ್ಬುಕ್ ಮೂಲಕ ಆರೋಪಿ ಕರುಣಾಕರ್ ಸ್ನೇಹಿತನಾಗಿದ್ದನು. ನಂತರ ಕರುಣಾಕರ್ ತನ್ನ ಸ್ನೇಹಿತ ರಾಜಶೇಖರ್ ನನ್ನು ಮಹಿಳೆಗೆ ಪರಿಚಯ ಮಾಡಿಸಿಕೊಟ್ಟಿದ್ದನು. ಸ್ವಲ್ಪ ದಿನಗಳ ನಂತರ ಮಹಿಳೆ ಮತ್ತು ರಾಜಶೇಖರ್ ತುಂಬಾ ಆತ್ಮೀಯರಾಗಿದ್ದರು. ಅಲ್ಲದೇ ಕರುಣಾಕರ್ ಬಳಿ ಮಹಿಳೆ ಮಾತನಾಡುವುದನ್ನು ಕಡಿಮೆ ಮಾಡಿದ್ದಳು. ಇದರಿಂದ ಕೋಪಗೊಂಡ ಕರುಣಾಕರ್ ಮಹಿಳೆಯ ಮನೆಗೆ ಹೋಗಿದ್ದನು.
ಆರೋಪಿ ಕರುಣಾಕರ್ ಮಹಿಳೆಯ ಮನೆಗೆ ಬರುವ ಮೊದಲೇ ರಾಜಶೇಖರ್ ಮನೆಯಲ್ಲಿದ್ದನು. ಇದನ್ನು ತಿಳಿದು ಕರುಣಾಕರ್ ಕೋಪಗೊಂಡು ಮನೆಗೆ ನುಗ್ಗಿದ್ದನು. ಮಹಿಳೆ ಕರುಣಾಕರ್ ಬರುವುದನ್ನು ನೋಡಿ ರಾಜಶೇಖರ್ ನನ್ನು ಬಾತ್ರೂಮಿನಲ್ಲಿ ಬಚ್ಚಿಟ್ಟುಕೊಳ್ಳುವಂತೆ ಹೇಳಿದ್ದಳು. ಆಗ ಕರುಣಾಕರ್, ರಾಜಶೇಖರ್ ನನ್ನು ಹೊರಗೆ ಬರುವಂತೆ ಹೇಳಿದ್ದಾನೆ. ಹೊರಗೆ ಬರದಿದ್ದರೆ ಬಾಲಕಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು, ಕೊನೆಗೆ ಬಾಲಕಿಯ ಕತ್ತನ್ನು ಕೊಯ್ದು ಕೊಲೆ ಮಾಡಿದ್ದನು.