ಚಿಕ್ಕಮಗಳೂರು: ಪತಿಯ ಸಾವಿನ ಸುದ್ದಿ ಕೇಳಿ ಪತ್ನಿಯೂ ಹೃದಯಾಘಾತದಿಂದ ಮೃತಪಟ್ಟ ಘಟನೆ ನಗರದ ಕೋಟೆ ಬಡಾವಣೆಯಲ್ಲಿ ನಡೆದಿದೆ.
ನ್ಯುಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದ ಕೋಟೆ ಬಡಾವಣೆ ನಿವಾಸಿ ಹರೀಶ್ ಅವರನ್ನು ಸೋಮವಾರ ಮಧ್ಯಾಹ್ನ ನಗರದ ಕೆ.ಆರ್.ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆ.ಆರ್.ಎಸ್. ಆಸ್ಪತ್ರೆಯಲ್ಲಿ ಹರೀಶ್ಗೆ ಆಕ್ಸಿಜನ್ ನೀಡಿ ಚಿಕಿತ್ಸೆ ನೀಡುತ್ತಿದ್ದರು. ಆಸ್ಪತ್ರೆಯಲ್ಲಿ ಆಕ್ಸಿಜನ್ ಖಾಲಿಯಾಗಿದ್ದರಿಂದ ವೈದ್ಯರು ಬೇರೆ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದರು. ಆ ಬಳಿಕ ಕುಟುಂಬಸ್ಥರು ಹರೀಶ್ ಅವರನ್ನ ನಗರದ ಹೋಲಿಕ್ರಾಸ್ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಹರೀಶ್ ಮೃತಪಟ್ಟಿದ್ದಾರೆ.
ತಂದೆ ಹರೀಶ್ ಮೃತಪಟ್ಟ ವಿಷಯವನ್ನ ಪಿಯುಸಿ ಓದುತ್ತಿರುವ ಮಗ ತಾಯಿಗೆ ಮೊಬೈಲ್ ಮೂಲಕ ಫೋನ್ ಮಾಡಿ ತಿಳಿಸಿದ್ದಾರೆ. ಪತಿ ಮೃತಪಟ್ಟ ಸುದ್ದಿ ಕೇಳಿ ಪತ್ನಿ ಸೌಮ್ಯ ಕೂಡ ವಿಷಯ ತಿಳಿದ ಹತ್ತೇ ನಿಮಿಷದಲ್ಲಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಈ ಮೂಲಕ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ. ಹರೀಶ್ ಹಾಗೂ ಸೌಮ್ಯಾ ದಂಪತಿಗೆ ಕೋವಿಡ್ ಸೋಂಕು ಇರಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಅಪ್ಪ-ಅಮ್ಮನನ್ನು ಕಳೆದುಕೊಂಡ ಮಗ ಹಾಗೂ ಸಂಬಂಧಿಕರ ನೋವು ನೋಡುಗರ ಕಣ್ಣಲ್ಲೂ ನೀರು ತರಿಸುವಂತಿತ್ತು. ಮೃತ ಹರೀಶ್ ನಗರದ ಎಂ.ಜಿ.ರಸ್ತೆಯಲ್ಲಿ ಗಿಫ್ಟ್ ಸೆಂಟರ್ ನಡೆಸುತ್ತಿದ್ದರು.