– ಹಾಸನ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ
ಹಾಸನ: ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮೆರೆದಿದ್ದು, ಗಂಡ ಕೊರೊನಾಗೆ ಬಲಿಯಾದ ಮರುದಿನವೇ ಪತ್ನಿಯೂ ಸೋಂಕಿನಿಂದ ಮೃತಪಟ್ಟಿರುವ ಮನಕಲಕುವ ಘಟನೆ ಹಾಸನದಲ್ಲಿ ನಡೆದಿದೆ.
ಇದಿಷ್ಟೇ ಅಲ್ಲದೇ ದಂಪತಿಯ ಏಕೈಕ ಪುತ್ರ ಕೂಡ ಇದೀಗ ಆಸ್ಪತ್ರೆಗೆ ದಾಖಲಾಗಿದ್ದು, ಇಡೀ ಕುಟುಂಬ ಕೊರೊನಾದಿಂದ ನಲುಗಿ ಹೋಗಿದೆ. ದೇವಾಲಯವೊಂದರ ಅರ್ಚರಾಗಿದ್ದ ಮಂಜುನಾಥ ಮತ್ತು ಅವರ ಪತ್ನಿ ಸ್ವರ್ಣ ಮೃತ ದುರ್ದೈವಿಗಳು. ಸ್ವರ್ಣ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಸದ್ಯ ಈ ದಂಪತಿಯ ಒಬ್ಬನೇ ಮಗನಿಗು ಕೂಡ ಕೊರೊನಾ ಪಾಸಿಟಿವ್ ಬಂದು ಆಸ್ಪತ್ರೆಗೆ ದಾಖಲಾಗಿದ್ದಾನೆ.
ದಂಪತಿಗಳ ನಿಧನಕ್ಕೆ ಗ್ರಾಮಸ್ಥರು ಹಾಗೂ ಆ ಭಾಗದ ಎಲ್ಲರೂ ತೀವ್ರ ಸಂತಾಪ ಸೂಚಿಸಿದ್ದಾರೆ. ಅವರ ಮಗನಿಗೆ ಬೇಗ ಗುಣಮುಖವಾಗಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ನೊಂದ ಕುಟುಂಬದ ನೆರವಿಗೆ ಜಿಲ್ಲಾಡಳಿತ ಮತ್ತು ಸರ್ಕಾರ ಧಾವಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.