– ಕಾಂಗ್ರೆಸ್ ಸೇರಿದ್ರೂ ನ್ಯಾಯ ಮುಖ್ಯ
– ರಾಜಕೀಯ ಅಲ್ಲ, ಮಕ್ಕಳು ಮುಖ್ಯ
ಧಾರವಾಡ: ನನ್ನ ಪತಿಯ ಕೊಲೆ ಪ್ರಕರಣ ಒಂದು ಹಂತಕ್ಕೆ ಮುಟ್ಟುತ್ತಿದೆ. ಅದು ನಮಗೆ ಸಂತೋಷ ತಂದಿದೆ ಎಂದು ಮಲ್ಲಮ್ಮ ಹೇಳಿದ್ದಾರೆ.
ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಾಜಿ ಸಚಿವ ವಿನಯ್ ಕುಲಕರ್ಣಿಯನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಯೋಗೀಶ್ ಪತ್ನಿ ಮಲ್ಲಮ್ಮ, ನಾನು ಕಾಂಗ್ರೆಸ್ ಪಕ್ಷ ಸೇರಿದರೂ ನನ್ನ ಪತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಎರಡು ಭಾವನೆ ಮಾಡಿಲ್ಲ. ಸತ್ಯಾಸತ್ಯತೆ ಹೊರ ಬರಲಿ, ನಾನು ವಿನಯ್ ಕುಲಕರ್ಣಿ ಬಗ್ಗೆ ಏನು ಮಾತನಾಡಲ್ಲ. ಈಗ ತನಿಖೆ ನಡೆದಿದೆ, ಅದು ನಡೆದೇ ನಡೆಯುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾನೂನಿಗಿಂತ ದೊಡ್ಡವರು ನಾವಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ನಾನು ಸಣ್ಣ ಮಕ್ಕಳನ್ನ ಕಟ್ಡಿಕೊಂಡು ಕಷ್ಟ ಅನುಭವಿಸಿದ್ದೇನೆ. ನಾನು ಯಾರನ್ನೂ ನೋಡಿ ಕಾಂಗ್ರೆಸ್ ಸೇರಿರಲಿಲ್ಲ. ನನ್ನ ಮೇಲೆ ಎರಡು ಬಾರಿ ಯಾರೋ ದಾಳಿ ಮಾಡಿದ್ರು. ಆಗ ನಾನು ಪ್ರಹ್ಲಾದ ಜೋಶಿ ಅವರ ಕಾಲು ಬಿದ್ದಿದ್ದೆ. ಅವರು ಯಾವುದಕ್ಕೂ ಸ್ಪಂದನೆ ಮಾಡಲಿಲ್ಲ ಎಂದು ಹೇಳಿದರು.
30 ಲಕ್ಷ ಸಾಲ ಮಾಡಿಸಿ ಜಿ.ಪಂಚಾಯತ್ ಚುನಾವಣೆ ಮಾಡಿಸಿದ್ರು. ತಾನೇ ನನ್ನ ಹೊಲ ಬರೆಸಿಕೊಳ್ಳಲು ಮುಂದಾದ್ರು. ನನ್ನ ಆಸ್ತಿ ಹೋಗುತ್ತೆ ಅಂತ ಹೇಳಿ ನಾನು ಕಾಂಗ್ರೆಸ್ ಸೇರಿದೆ. ಆದರೆ ನಾನು ವಿನಯ್ ಕುಲಕರ್ಣಿ ಅವರಿಂದ ಪಕ್ಷ ಸೇರಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿ ಸಿದ್ದರಾಮಯ್ಯನವರ ಬಳಿ ಹೋಗಿದ್ದೆ ಎಂದರು. ಇದನ್ನೂ ಓದಿ; ಮಾಜಿ ಸಚಿವ ವಿನಯ್ ಕುಲಕರ್ಣಿ ಸಿಬಿಐ ವಶಕ್ಕೆ
ನಾನು ನನ್ನ ಪತಿಯನ್ನ ಕಳೆದುಕೊಂಡಿದ್ದೇನೆ. ಈಗ ನನ್ನ ಮಕ್ಕಳು ಮುಖ್ಯ ನನಗೆ. ನನಗೆ ರಾಜಕೀಯ ಮುಖ್ಯ ಅಲ್ಲ, ನ್ಯಾಯಾಲಯ ಎಲ್ಲರಿಗೆ ನ್ಯಾಯ ಕೊಡೋದಕ್ಕೆ ಇದೆ. ವಿನಯ್ ಕುಲಕರ್ಣಿ ಪಾತ್ರ ಕೊಲೆಯಲ್ಲಿ ಇದೆಯೋ ಇಲ್ಲವೋ ಎಂದು ಸಿಬಿಐ ಅಧಿಕಾರಿಗಳು ಹೊರ ತೆಗೆಯುತ್ತಾರೆ ಎಂದು ವಿಸ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ತಮ್ಮನಂತೆ ಅಣ್ಣ ವಿನಯ್ ಕುಲಕರ್ಣಿಗೂ ಜನ್ಮದಿನ ಮುಂಚೆಯೇ ಸಿಬಿಐ ವಿಚಾರಣೆ