ಬೆಂಗಳೂರು: ಸ್ಯಾಂಡಲ್ವುಡ್ನ ಕೋಟಿ ನಿರ್ಮಾಪಕ ಎಂದೇ ಖ್ಯಾತಿ ಪಡೆದಿದ್ದ ನಿರ್ಮಾಪಕ ರಾಮು ಸೋಮವಾರ ಕೊರೊನಾದಿಂದ ಸಾವನ್ನಪ್ಪಿದರು. ಪತಿಯನ್ನು ಕಳೆದುಕೊಂಡು ದುಃಖದಲ್ಲಿರುವ ಮಾಲಾಶ್ರೀಗೆ ನಟಿ ಶ್ರುತಿ ಸಾಮಾಜಿಕ ಜಾಲತಾಣದ ಮೂಲಕ ಭಾವುಕ ಪತ್ರ ಬರೆದು ಸಾಂತ್ವಾನ ಹೇಳಿದ್ದಾರೆ.
‘ಮೊದಲಿಗೆ ಭಾರವಾದ ಹೃದಯದಿಂದ ರಾಮು ಅವರಿಗೆ ಭಾವ ಪೂರ್ಣ ಶ್ರದ್ಧಾಂಜಲಿ. ನಿಮ್ಮ ಅಭಿಮಾನಿಯಾಗಿ, ನಿಮ್ಮ ಸಹೋದ್ಯೋಗಿಯಾಗಿ, ಒಬ್ಬ ಗೆಳತಿಯಾಗಿ ಇಂಥ ದುಃಖದ ಪರಿಸ್ಥಿತಿಯಲ್ಲಿ ನಿಮ್ಮನ್ನು ನೋಡಲು ಸಾಧ್ಯವಾಗದೇ ಕನಿಷ್ಠ ನಿಮ್ಮ ಕಣ್ಣೀರನ್ನು ಒರೆಸಲು ಸಾಧ್ಯವಾಗದ ಕ್ರೂರ ಪರಿಸ್ಥಿತಿಗೆ ನನ್ನದೊಂದು ದಿಕ್ಕಾರ.’
ಮಾಲಾ ನಿಮಗಾದ ನಷ್ಟವನ್ನು ಸರಿಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಮುಂಬರುವ ದಿನಗಳನ್ನು ಧೈರ್ಯವಾಗಿ ಎದುರಿಸಬೇಕಾಗಿರುವ ಅನಿವಾರ್ಯತೆ ಇದೆ. ನಿಮಗಾಗಿ, ನಿಮ್ಮ ಕೋಟ್ಯಾನುಕೋಟಿ ಅಭಿಮಾನಿಗಳಿಗಾಗಿ, ಬಹುಮುಖ್ಯವಾಗಿ ನಿಮ್ಮ ಮುದ್ದು ಮಕ್ಕಳ ಭವಿಷ್ಯಕ್ಕಾಗಿ. ನೀವು ಹುಟ್ಟು ಹೋರಾಟಗಾರ್ತಿ. ಅದು ನನ್ನ ಕಣ್ಣಾರೆ ನೋಡಿದ್ದೇನೆ.’
ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ ಮಿಂಚಿದ್ದು ಕೇವಲ ಅದೃಷ್ಟದಿಂದ ಅಲ್ಲ. ನಿಮ್ಮ ಪರಿಶ್ರಮದಿಂದ. ನಂತರ ಒಬ್ಬ ಉತ್ತಮ ಗೃಹಿಣಿ ಆಗಿದ್ದು, ಕೇವಲ ದೇವರ ವರದಿಂದ ಅಲ್ಲಾ ತ್ಯಾಗ, ಸಹನೆ, ಪ್ರೀತಿಯಿಂದ, ಒಳ್ಳೆ ತಾಯಿ ಆಗಲೂ ಅಷ್ಟೇ ಶ್ರಮ, ಪ್ರಯತ್ನ ಇದ್ದೇ ಇರುತ್ತೆ.’ ಹೀಗೆ ಜೀವನದ ಎಲ್ಲಾ ಏರಿಳಿತದ ಸಂದರ್ಭವನ್ನು ಧೈರ್ಯವಾಗಿ ನಿಭಾಯಿಸಿಕೊಂಡು ಬಂದಿದ್ದೀರಿ. ರಾಮು ಅವರಿಲ್ಲದ ಮುಂದಿನ ದಿನಗಳು ನಿಮಗೆ ಕಷ್ಟಕರವಾಗಿದ್ದರೂ ಅದನ್ನು ನಿಭಾಯಿಸುತ್ತೀರಿ ಹಾಗೂ ನಿಭಾಯಿಸುವ ಶಕ್ತಿ ಆ ದೇವರು ನಿಮಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತಾ, ಆ ಕಷ್ಟದ ಹಾದಿಯಲ್ಲಿ ಎಂದಾದರೂ ಈ ಗೆಳತಿಯ ಸಹಾಯ ಬೇಕಾದಲ್ಲಿ ಒಂದು ಫೋನ್ ಕಾಲ್ ಸಾಕು ಎಂದು ಪತ್ರ ಬರೆದಿದ್ದಾರೆ.
View this post on Instagram
ಜೊತೆಗೆ ಕಾಮೆಂಟ್ ಸೆಕ್ಷನ್ನಲ್ಲಿ ಎಲ್ಲರಲ್ಲಿಯೂ ಒಂದು ಕಳಕಳಿಯ ಮನವಿ ಮುಂದೊಂದು ದಿನ ಈ ಕುಟುಂಬದ ಸದಸ್ಯರು ಬದುಕನ್ನು ಕಟ್ಟಿಕೊಳ್ಳಲು ಅವರು ಮಾಡುವ ಪ್ರಯತ್ನಕ್ಕೆ ನಿಮ್ಮೆಲ್ಲರ ಸಹಕಾರ ಇರಲಿ ಹಾಗೂ ಸೆಲೆಬ್ರೆಟಿಗಳ ಬದುಕಿನ ಬಗ್ಗೆ ಸುಲಭವಾಗಿ ಮತ್ತು ಹಗುರವಾಗಿ ಕಾಮೆಂಟ್ ಮಾಡುವುದರ ಬದಲು ಒಂದು ಒಳ್ಳೆಯ ಕಮಿಟ್ಮೆಂಟ್ ಇರಲಿ ಏಕೆಂದರೆ ಬದುಕನ್ನು ಕಟ್ಟಿಕೊಳ್ಳುವ ಕೆಲಸ ಸುಲಭವಲ್ಲ ಎಂದು ಬರೆದುಕೊಂಡಿದ್ದಾರೆ.