ಚಿಕ್ಕಮಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ತಮ್ಮ ಪಕ್ಷದ ಶಾಸಕನ ಮನೆ ಧ್ವಂಸವಾಗಿರೋದಕ್ಕಿಂತ ಸಮಾಜಘಾತುಕ ಶಕ್ತಿಗಳೇ ದೊಡ್ಡವಾದವು ಎಂದು ಸಚಿವ ಸಿ.ಟಿ ರವಿ ಡಿಕೆಶಿ ವಿರುದ್ಧ ಕಿಡಿ ಕಾರಿದ್ದಾರೆ.
ಜಿಲ್ಲೆಯ ಎನ್ಆರ್ಪುರ ತಾಲೂಕಿನ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಆವರಣದಲ್ಲಿ ಜಗದ್ಗುರು ರೇಣುಕಾಚಾರ್ಯರ 51 ಅಡಿ ಪ್ರತಿಮೆಗೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ವೇಳೆ ಪೊಲೀಸರು ಕಾರ್ಪೋರೇಟರ್ಗಳಿಗೆ ನೋಟಿಸ್ ಕೊಟ್ಟಿರೋದಕ್ಕೆ ಸರ್ಕಾರದ ವಿರುದ್ಧ ಡಿಕೆಶಿ ಅಸಮಾಧಾನ ಹೊರಹಾಕಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಡಿಕೆಶಿ ಆರೋಪ ಮಾಡೋದು ಅವರನ್ನ ಬೆಂಬಲಿಸುವ ಮಾತುಗಳನ್ನಾಡಿದ್ದಾರೆ ಎಂದರು.
ಸುಖಾಸುಮ್ಮನೆ ಮಾಡಲು ಇಲ್ಲಿ ಯಾರೂ ಕೆಲಸ ಇಲ್ಲದೆ ಇರೋರಿಲ್ಲ. 300ಕ್ಕೂ ಹೆಚ್ಚು ವಾಹನ ಸುಟ್ಟಿದ್ದಾರೆ. ಪೊಲೀಸ್ ಸ್ಟೇಷನ್ ಭಸ್ಮ ಆಗಿದೆ. ಅವರದ್ದೇ ಪಕ್ಷದ ಶಾಸಕನ ಮನೆಯೂ ಭಸ್ಮ ಆಗಿದೆ. ಅವರು ಬೇರೆ ಪಕ್ಷ ಇರಬಹುದು. ಆದರೆ ಅವರ ರಾಜಕಾರಣದ ದಾರಿ ಬಗ್ಗೆ ಅನುಮಾನದ ಮಾತುಗಳನ್ನಾಡಿದ್ದಾರೆ. ಅವರು ಆಲೋಚಿಸುವ ರೀತಿ ನೋಡಿದ್ರೆ, ತಮ್ಮ ಪಕ್ಷದ ಶಾಸಕನಿಗಿಂತ ಸಮಾಜಘಾತುಕ ಶಕ್ತಿಗಳೇ ಇವರಿಗೆ ದೊಡ್ಡವಾದವು ಎಂದು ಡಿಕೆಶಿ ವಿರುದ್ಧ ಕಿಡಿಕಾರಿದ್ದಾರೆ.
ಸಂಪನ್ನರು ಭಯ ಬೀಳಬೇಕಿಲ್ಲ. ಕಳ್ಳರನ್ನ ಬಿಡೋದಿಲ್ಲ ಎಂದಿದ್ದಾರೆ. 300ಕ್ಕೂ ಹೆಚ್ಚು ಜನರನ್ನ ಬಂಧಿಸಿದೆ. ನಮ್ಮ ಪಕ್ಷ ಸಮಾಜಘಾತುಕ ಶಕ್ತಿಗಳ ಜೊತೆ ರಾಜಿ ಮಾಡಿಕೊಂಡು ಆಡಳಿತ ಮಾಡೋ ಪಕ್ಷವಲ್ಲ. ಯಾವುದೇ ಸಮಾಜಘಾತುಕ ಶಕ್ತಿಗಳ ಜೊತೆ ನಾವು ರಾಜಿನೂ ಮಾಡಿಕೊಳ್ಳಲ್ಲ. ಅವರ ಜೊತೆ ಲಾಭ ಮಾಡಿಕೊಳ್ಳೋ ರಾಜಕಾರಣವನ್ನೂ ನಾವು ಮಾಡಲ್ಲ ಎಂದಿದ್ದಾರೆ. 300ಕ್ಕೂ ಹೆಚ್ಚು ಜನರನ್ನ ಬಂಧಿಸಿದ್ದೇವೆ. ಅದಕ್ಕೆ ಬೇಕಾದಂತಹ ಸಾಕ್ಷ್ಯಾಧಾರಗಳನ್ನ ಸಂಗ್ರಹಿಸಿದ್ದೇವೆ ಎಂದು ತಿಳಿಸಿದರು.
ವಾಟ್ಸಾಪ್-ಫೇಸ್ಬುಕ್ನಲ್ಲಿ ಯಾರ್ಯಾರು ಕರೆ ಕೊಟ್ರು, ಎಲ್ಲೆಲ್ಲಿ ಮಾರಕಾಯುಧಗಳನ್ನ ಸಂಗ್ರಹಿಸಿಟ್ರು. ಪೆಟ್ರೋಲ್ ಸಂಗ್ರಹ ಎಲ್ಲಿ, ಹಣದ ಮೂಲ ಎಲ್ಲಿ ಎಲ್ಲದರ ಮಾಹಿತಿ ಸಂಗ್ರಹವಾಗ್ತಿದೆ. ಎಲ್ಲವನ್ನ ಜನರ ಮುಂದೆ ಇಡ್ತೀವಿ, ಯಾವುದೇ ರಾಜಿ ಪ್ರಶ್ನೆ ಇಲ್ಲ. ರಾಜಿ ಆಗಲು ಪಕ್ಷದ ಒಳಗೂ ಬಿಡಲ್ಲ. ಹೊರಗೂ ಬಿಡಲ್ಲ ಎಂದಿದ್ದಾರೆ.