ಚಿಕ್ಕೋಡಿ(ಬೆಳಗಾವಿ): ಕಳೆದ ಹಲವಾರು ದಿನಗಳಿಂದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ರೈತರ ಜಮೀನುಗಳಲ್ಲಿ ಮತ್ತು ನದಿ ತೀರದಲ್ಲಿ ಪಂಪಸೆಟ್ ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ಗ್ರಾಮದ ಜನರೇ ಹಿಡಿದು ಧರ್ಮದ ಏಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿಯನ್ನು ರವಿ ಗೊಲ್ಲರ ಎಂದು ಗುರುತಿಸಲಾಗಿದ್ದು ಇನ್ನೋರ್ವ ಕಳ್ಳ ಪರಾರಿಯಾಗಿದ್ದಾನೆ. ಅಥಣಿ ತಾಲೂಕಿನ ದೇವರಡ್ಡೇರಹಟ್ಟಿ ಗ್ರಾಮದಲ್ಲಿ ಅಗ್ರಾಣಿ ಹಳದಲ್ಲಿ ಅಳವಡಿಸಿದ್ದ ಪಂಪಸೆಟ್ ಕಳ್ಳತನ ಮಾಡಿ ಹೊತ್ತೊಯ್ಯುವ ವೇಳೆ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಕಳ್ಳನಿಗೆ ಜನರೆ ಭರ್ಜರಿ ಗೂಸಾ ನೀಡಿದ್ದು, ಒಂದು ಪಂಪಸೆಟ್ ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಧಾರಾವಾಹಿ ಖ್ಯಾತಿಯ ನಟಿ ಚೈತ್ರಾ ರೈ ಸೀಮಂತ
ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಅಥಣಿ ಪಿಎಸ್ಐ ಕುಮಾರ ಹಾಡಕಾರ ಮತ್ತು ಸಿಬ್ಬಂದಿ ಕಳ್ಳನನ್ನು ವಶಕ್ಕೆ ಪಡೆದು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಜಮೀನುಗಳಲ್ಲಿ ಅಳವಡಿಸಿದ್ದ ಪಂಪಸೆಟ್ಗಳಿಗೆ ಕನ್ನ ಹಾಕಿ ಅರ್ಧ ಬೆಲೆಗೆ ಮಾರುವ ತಂಡ ಅಥಣಿ ತಾಲೂಕಿನಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಆರೋಪಗಳು ಹಲವು ದಿನಗಳಿಂದ ಕೇಳಿಬರುತ್ತಿದ್ದು, ಇಂದು ಒಬ್ಬ ವ್ಯಕ್ತಿ ಜನರ ಕೈಗೆ ಸಿಕ್ಕಿ ಬಿದ್ದಿರುವದರಿಂದ ಈ ಬಗ್ಗೆ ವಿಶೇಷ ಕಾಳಜಿವಹಿಸಿ ತನಿಖೆ ನಡೆಸಿ ನೊಂದ ರೈತರಿಗೆ ನ್ಯಾಯ ಕೊಡಿಸಬೇಕು ಎಂದು ದೇವರಡ್ಡೇರಹಟ್ಟಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.