ಚಂಡೀಗಢ: ಪಾಕಿಸ್ತಾನ ಪಂಜಾಬ್ ಗಡಿಯಲ್ಲಿ ಭಾರತಕ್ಕೆ ಅಕ್ರಮವಾಗಿ ಒಳನುಸುಳುತ್ತಿದ್ದ ಐವರು ನುಸುಳುಕೋರರನ್ನು ಭಾರತೀಯ ಸೈನಿಕರು ಹೊಡೆದು ಹಾಕಿದ್ದಾರೆ.
ಇಂದು ಮುಂಜಾನೆ ಈ ಘಟನೆ ನಡೆದಿದ್ದು, ಐದು ಜನ ನುಸುಳುಕೋರರು ಪಂಜಾಬ್ ಗಡಿಯಿಂದ ಭಾರತಕ್ಕೆ ಅಕ್ರಮವಾಗಿ ಬರುತ್ತಿರುವುದನ್ನು ಸೈನಿಕರು ನೋಡಿದ್ದಾರೆ. ಈ ವೇಳೆ ಅವರನ್ನು ತಡೆಯಲು ಹೋದಾಗ ಅವರು ಸೈನಿಕರ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಆಗ ಭಾರತೀಯ ಸೈನಿಕರು ಕೂಡ ದಾಳಿ ಮಾಡಿದ್ದು, ಐದು ಜನ ನುಸುಳುಕೋರರನ್ನು ಹೊಡೆದು ಹಾಕಿದ್ದಾರೆ.
ಈ ಬಗ್ಗೆ ಮಾತನಾಡಿರುವ ಭಾರತೀಯ ಸೇನೆಯ ಹಿರಿಯ ಅಧಿಕಾರಿ, ಕಳೆದ ಒಂದು ದಶಕದಲ್ಲಿ ಇದೇ ಮೊದಲ ಬಾರಿಗೆ ಐದು ಮಂದಿ ನುಸುಳುಕೋರರನ್ನು ಒಂದೇ ಪ್ರಯತ್ನದಲ್ಲಿ ಭಾರತೀಯ ಸೇನೆ ಹೊಡೆದು ಹಾಕಿದೆ. ಪಾಕಿಸ್ತಾನ ಮತ್ತು ಭಾರತದ ಗಡಿ ಪ್ರದೇಶ ಸುಮಾರು 3,300 ಕಿಮೀ ವಿಸ್ತೀರ್ಣದಲ್ಲಿ ಇದೆ. ಇದರಲ್ಲಿ 553 ಕಿಮೀ ಗಡಿ ಪ್ರದೇಶ ಪಂಜಾಬ್ನಲ್ಲಿ ಇದೆ ಎಂದು ಹೇಳಿದ್ದಾರೆ.
ಇಂದು ಮುಂಜಾನೆ 4.45ರ ಸುಮಾರಿಗೆ ಭಿಖಿವಿಂದ್ ಪಟ್ಟಣ ತರಣ್ ತರಣ್ ಹತ್ತಿರವಿರುವ `ದಾಲ್’ ಗಡಿ ಪೋಸ್ಟ್ ಬಳಿ ನುಸುಳುಕೋರರ ಅನುಮಾನಾಸ್ಪದ ಚಲನೆಯನ್ನು ಭಾರತೀಯ ಸೇನೆಯ 103ನೇ ಬೆಟಾಲಿಯನ್ನ ಸೈನಿಕರು ಗಮನಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಹೋದ ಸೈನಿಕರು ಅವರನ್ನು ತಡೆಯಲು ಪ್ರಯತ್ನಿಸಿದ್ದಾರೆ. ಈ ವೇಳೆ ನುಸುಳುಕೋರರು ಸೇನೆಯ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಗುಂಡಿನ ಚಕಮಕಿ ನಡೆದಿದ್ದು, ಐವರು ನುಸುಳುಕೋರರು ಹತರಾಗಿದ್ದಾರೆ.
ಶುಕ್ರವಾರ ಮಧ್ಯೆರಾತ್ರಿಯಿಂದಲೇ ಗಡಿ ಪ್ರದೇಶದಲ್ಲಿ ಕೆಲವರು ಅನುಮಾನಸ್ಪದವಾಗಿ ಓಡಾಡುತ್ತಿದ್ದರು. ಇದರಿಂದ ಸೇನೆ ಗಡಿ ಪ್ರದೇಶದ ಮೇಲೆ ಕಣ್ಣಿಟ್ಟಿತ್ತು. ಹೀಗಿರುವಾಗ ಮುಂಜಾನೆ ಬಂದೂಕುಗಳನ್ನು ಹಿಡಿದುಕೊಂಡು ಹುಲ್ಲಿನ ನಡುವೆ ಅವಿತುಕೊಂಡು ನುಸುಳುಕೋರರು ಬರುವುದನ್ನು ಸೇನೆ ಗಮನಿಸಿದೆ. ಈ ವೇಳೆ ಗುಂಡಿನ ದಾಳಿ ಮಾಡಿ ನುಸುಳುಕೋರರನ್ನು ಹೊಡೆದು ಹಾಕಿದೆ. ನುಸುಳುಕೋರರು ತಂದಿರುವ ಮದ್ದುಗುಂಡುಗಳಿಗಾಗಿ ಸೇನೆ ಹುಡುಕಾಟ ಮುಂದುವರಿಸಿದೆ.