ಬೆಂಗಳೂರು: ಕೊರೊನಾ ಹೊಸ ಅಲೆ ತಡೆಯುವ ಹಿನ್ನೆಲೆ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಗೆ ತರಬೇಕಾ ಅಥವಾ ಬೇಡ ಎಂಬುದರ ಬಗ್ಗೆ ಸರ್ಕಾರ ಮತ್ತೆ ಗೊಂದದಲ್ಲಿ ಸಿಲುಕಿದಂತೆ ಕಾಣಿಸುತ್ತಿದೆ.
9 ತಿಂಗಳ ಹಿಂದೆ ಮೊದಲ ಬಾರಿಗೆ ಕೊರೋನಾ ಸೋಂಕು ಪತ್ತೆಯಾದ ನಂತರ ರಾಜ್ಯ ಸರ್ಕಾರ ಮಾಡಿದ ಯಡವಟ್ಟು ನಿರ್ಧಾರಗಳು. ಇವುಗಳಿಂದ ಜನ ಏನೆಲ್ಲಾ ಸಂಕಷ್ಟ ಅನುಭವಿಸಿದ್ರು ಎಂಬುದು ಎಲ್ಲರಿಗೂ ತಿಳಿದಿದೆ. ಆದ್ರೆ ರಾಜ್ಯ ಸರ್ಕಾರ ಎಚ್ಚೆತ್ತಂತೆ ಕಂಡಿಲ್ಲ. ಈಗಲೂ ಟಫ್ ರೂಲ್ಸ್ ಜಾರಿ ಖಡಕ್ ನಿರ್ಧಾರ ತೆಗೆದುಕೊಳ್ಳಲು ಮೀನಾಮೇಷ ಎಣಿಸುತ್ತಿದೆ. ಸಿಎಂ ನೈಟ್ ಕರ್ಫ್ಯೂ ಇಲ್ಲ ಅಂದ್ರೆ, ಆರೋಗ್ಯ ಮಂತ್ರಿಗಳು ಮಾತ್ರ ನೈಟ್ ಕರ್ಫ್ಯೂ ಜಾರಿಯ ಸುಳಿವು ನೀಡಿದ್ದಾರೆ.
ಇಂದು ಬೆಳಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಸಿಎಂ, ದೇಶಾದ್ಯಂತ ಈ ಬಗ್ಗೆ ಅಲರ್ಟ್ ಘೋಷಣೆ ಮಾಡಲಾಗಿದ್ದು, ಪ್ರಧಾನಿ ಮೋದಿಯವರು ಹೊಸ ವೈರಸ್ ಬಗ್ಗೆ ಆತಂಕ ವ್ಯಕ್ತಪಡಿಸಿ ದೇಶದ ಜನತೆ ಎಚ್ಚರಿಕೆಯಿಂದಿರಬೇಕೆಂದು ತಿಳಿಸಿದ್ದಾರೆ. ನಾವು ಸೋಂಕು ಹರಡದಂತೆ ಕಟ್ಟೆಚ್ಚರ ಕ್ರಮಗಳನ್ನ ತೆಗೆದುಕೊಂಡಿದ್ದೇವೆ. ಈ ಬಾರಿ ಹೊಸ ವರ್ಷದ ಆಚರಣೆಯೇ ಇಲ್ಲ. ಈ ರೀತಿಯ ಹಲವು ಕಾರಣಗಳಿಂದ ಹೊಸ ವರ್ಷ ಆಚರಣೆ ಬೇಡ ಅಂತ ಜನತೆಗೆ ಹೇಳಿದ್ದೇವೆ. ಸದ್ಯಕ್ಕೆ ರಾಜ್ಯದಲ್ಲಿ ನೈಟ್ ಕರ್ಫ್ಯೂ ಅಗತ್ಯವಿಲ್ಲ ಎಂದು ಹೇಳಿದ್ದರು.
ನಮ್ಮ ಸರ್ಕಾರಕ್ಕೆ ಜನರ ಆರೋಗ್ಯವೇ ಮುಖ್ಯ. ಅವರ ರಕ್ಷಣೆಗಾಗಿ ನೈಟ್ ಕರ್ಫ್ಯೂ ಜಾರಿ ಬಗ್ಗೆ ಸಿಎಂ ಜೊತೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ತೀವಿ ಎಂದು ಸಚಿವ ಸುಧಾಕರ್ ಹೇಳಿದ್ದಾರೆ. ಮುಂದೇನು ಮಾಡಬೇಕು ಎಂಬ ಬಗ್ಗೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ನೀಡುವ ವರದಿಗಾಗಿ ರಾಜ್ಯ ಸರ್ಕಾರ ಕಾಯುತ್ತಿದೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಟಾಸ್ಕ್ ಫೋರ್ಸ್ ಸದಸ್ಯರು ಆಗಿರುವ ಸಿಎನ್ ಮಂಜುನಾಥ್ ಮಾತನಾಡಿ, ಸರ್ಕಾರ ಟಫ್ ರೂಲ್ಸ್ ಜಾರಿ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.