ಬೆಂಗಳೂರು: ಕೊರೊನಾ ನಿಯಂತ್ರಣ ಮಾಡುವುದಕ್ಕಾಗಿ ರಾಜ್ಯದಲ್ಲಿ ಮತ್ತೆ ನೈಟ್ ಕರ್ಫ್ಯೂ ಜಾರಿಗೊಳಿಸುವ ವಿಚಾರದಲ್ಲಿ ಆರ್ ಅಶೋಕ್ ಹೇಳಿಕೆಯನ್ನು ಆರೋಗ್ಯ ಸಚಿವ ಡಾ. ಸುಧಾಕರ್ ಸಮರ್ಥಿಸಿಕೊಂಡಿದ್ದಾರೆ.
ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾನಾಡಿದ್ದ ಸಚಿವ ಅಶೋಕ್, ಬ್ರಿಟನ್ನಿಂದ ಬಂದಿರುವ ರೂಪಾಂತರಿಕ ವೈರಸ್ ವೇಗವಾಗಿ ಹರಡುತ್ತಿದ್ದು ಇದರ ತಡೆಗಟ್ಟುವಿಕೆಗಾಗಿ ಕಫ್ರ್ಯೂ ಅಗತ್ಯವಿದೆ ಎಂದಿದ್ದರು. ಆದರೆ ಆರೋಗ್ಯ ಸಚಿವ ಸುಧಾಕರ್ ರಾತ್ರಿ ಕರ್ಫ್ಯೂ ಮುಗಿದ ಅಧ್ಯಾಯ. ಇನ್ನೂ ಕರ್ಫ್ಯೂ ಜಾರಿ ಮಾಡಲಾಗುವುದಿಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ ಎಂದು ಮಾಧ್ಯಮಗಳೊಂದಿಗೆ ಹೇಳಿಕೆ ಕೊಟ್ಟಿದ್ದರು. ಇದರಿಂದ ಇಬ್ಬರು ಸಚಿವರ ಹೇಳಿಕೆಯಲ್ಲಿ ಭಿನ್ನ ನಿಲುವು ಕಂಡುಬಂದಿತ್ತು.
ಇದೀಗ ಈ ಹೇಳಿಕೆಯನ್ನು ಸುಧಾಕರ್ ಸಮರ್ಥಿಸಿಕೊಂಡಿದ್ದಾರೆ. ನೈಟ್ ಕರ್ಫ್ಯೂ ಬಗ್ಗೆ ನಮ್ಮಲ್ಲಿ ದ್ವಂದ್ವಗಳಿಲ್ಲ. ಅಶೋಕ್ ಅವರು ಕರ್ಫ್ಯೂ ಮಾಡಿದ್ದರೆ ಚೆನ್ನಾಗಿತ್ತು ಎಂದು ಹೇಳಿದ್ದಾರೆ ಅಷ್ಟೇ ಎಂದಿದ್ದಾರೆ.
ಬ್ರಿಟನ್ನಿಂದ ಬಂದ 30 ಜನಕ್ಕೆ ಪಾಸಿಟಿವ್ ಬಂದಿತ್ತು. ಇನ್ನೂ ಅವರ ಸಂಪರ್ಕದಲ್ಲಿದ್ದ 6 ಜನಕ್ಕೂ ಸೋಂಕು ತಗುಲಿದೆ. ಹಾಗೆ 7 ಜನರಿಗೆ ರೂಪಾಂತರ ವೈರಸ್ ಕಂಡುಬಂದಿದೆ. ಎಲ್ಲರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪತ್ತೆ ಆಗದಿರುವ 199 ಜನರಲ್ಲಿ 80 ಜನ ನಮ್ಮ ದೇಶದ ಪ್ರಜೆಗಳಲ್ಲ, ಅವರನ್ನು ಕೂಡ ಪತ್ತೆ ಹಚ್ಚಲು ಕ್ರಮ ತೆಗೆದುಕೊಂಡಿದ್ದೇವೆಂದು ತಿಳಿಸಿದರು.
ಸುರಕ್ಷಿತವಾಗಿ ಹೊಸ ವರ್ಷವನ್ನು ಆಚರಣೆ ಮಾಡಿ. ಈ ಬಾರಿ ಕೊರೊನಾ ಕಾರಣದಿಂದ ಆಚರಣೆ ಮಾಡದಿದ್ದರೆ ತುಂಬಾ ಒಳ್ಳೆಯದು. ನಾನು ರಾಜ್ಯದ ಆರೋಗ್ಯ ಸಚಿವನಾಗಿ ಈ ಕಿವಿಮಾತು ಹೇಳುತ್ತಾ ಇದ್ದೇನೆ, ಗುಂಪು ಗುಂಪಾಗಿ ಸೇರಿ ಈ ಬಾರಿ ಆಚರಣೆ ಬೇಡ. ಮಾಡಲೇ ಬೇಕೆಂದಿದ್ದರೆ ನಿಮ್ಮ ನಿಮ್ಮ ಮನೆಗಳಲ್ಲೇ ಸರಳವಾಗಿ ಆಚರಿಸಿ ಎಂದು ರಾಜ್ಯದ ಜನರಲ್ಲಿ ಸಚಿವರು ವಿನಂತಿಸಿಕೊಂಡರು.