ಹುಬ್ಬಳ್ಳಿ: ಪತ್ನಿಯ ಮೇಲೆ ಅನುಮಾನಪಡುತ್ತಿದ್ದ ವ್ಯಕ್ತಿಯೋರ್ವ ಆಕೆಗೆ ನೇಣಿ ಬಿಗಿದು ಮನೆಯ್ಲಲಿಯೇ ಕೊಲೆ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಆರೋಪಿಯನ್ನು ಮಹಾದೇವಪ್ಪ ಎಂದು ಗುರುತಿಸಲಾಗಿದ್ದು, ಈತ ಹುಬ್ಬಳ್ಳಿಯ ಲಿಂಗರಾಜನಗರದ ಬಳಿ ಇರುವ ಹನುಮಂತನಗರ ಬಡಾವಣೆಯ ನಿವಾಸಿಯಾಗಿದ್ದಾನೆ ಹಾಗೂ ಕಾರು ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದನು.
ತನ್ನ ಮೊದಲ ಗಂಡನನ್ನು ಬಿಟ್ಟು ಬಂದಿದ್ದ ಕೋಲ್ಕತಾ ಮೂಲದ ಮಹಿಳೆ ರೇಣುಕರನ್ನು ಕಳೆದ ವರ್ಷ ಮದುವೆಯಾಗಿದ್ದಾನೆ. ಆದರೆ ಪತ್ನಿಯ ಮೇಲೆ ಸದಾ ಸಂಶಯ ವ್ಯಕ್ತಪಡಿಸುತ್ತಿದ್ದ ಪತಿ ಮಹಾದೇವಪ್ಪ ಇಂದು ಬೆಳಗ್ಗೆ ಪತ್ನಿಯನ್ನು ಮನೆಯಲ್ಲೇ ನೇಣು ಬಿಗಿದು ಕೊಲೆ ಮಾಡಿದ್ದಾನೆ.
ಕೊಲೆ ಮಾಡಿದ ನಂತರ ಪತ್ನಿ ರೇಣುಕಾ ನೇಣು ಹಾಕಿಕೊಂಡಿದ್ದಾಳೆಂದು ಬಿಂಬಿಸುವ ಪ್ರಯತ್ನವನ್ನ ಮಾಡಿದ್ದಾನೆ. ಆದರೆ ಪೊಲೀಸರು ನಡೆಸಿದ ವಿಚಾರಣೆ ವೇಳೆ ಆರೋಪಿ ಮಹಾದೇವಪ್ಪ ಸತ್ಯವನ್ನು ಬಹಿರಂಗ ಪಡಿಸಿದ್ದಾನೆ. ಘಟನೆ ಕುರಿತು ವಿದ್ಯಾನಗರ ಪೊಲೀಸರು ಆರೋಪಿ ಮಹದೇವಪ್ಪನನ್ನು ಇದೀಗ ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವಿದ್ಯಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.