ಹಾವೇರಿ: ನೆಹರು ಕುಟುಂಬವನ್ನು ಹೊಗಳಿದರೆ ಮಾತ್ರ ಡಿ.ಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಉಳಿಯುತ್ತಾರೆ. ಇಲ್ಲದಿದ್ದರೆ ಅವರನ್ನು ಕಿತ್ತು ಬಿಸಾಕುತ್ತಾರೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ತನ್ನನ್ನು ಬಿಸಾಕಬಾರದೆಂದು ಡಿಕೆಶಿಯವರು ನೆಹರು ಫ್ಯಾಮಿಲಿಯನ್ನು ಆಗಾಗ ಹೊಗಳುತ್ತಿರುತ್ತಾರೆ. ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬರ ತ್ಯಾಗದಿಂದ ಈ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಸ್ವಾತಂತ್ರ್ಯ ತರುವ ಸಂದರ್ಭದಲ್ಲಿ ಯಾವುದೇ ಪಕ್ಷ, ಪಂಗಡಗಳು, ರಾಜಕೀಯ ಇರಲಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಇರಲಿಲ್ಲ. ಇಂಗ್ಲೀಷರ ಆಡಳಿತಕ್ಕೆ ಒಳಪಟ್ಟ ಸಂದರ್ಭದಲ್ಲಿ ಪ್ರತಿಯೊಬ್ಬ ಪ್ರಜೆ ದೇಶಕ್ಕೆ ಸ್ವಾತಂತ್ರ್ಯ ಬರಬೇಕು ಅಂತಾ ಹೋರಾಟ ಮಾಡಿದ್ದಾರೆ. ಅದರಲ್ಲಿ ನೆಹರು ದೊಡ್ಡವರಾದರು, ಪ್ರಧಾನ ಮಂತ್ರಿಗಳಾದರಷ್ಟೆ ಎಂದರು.
ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿ 15 ದಿನಗಳಾಗಿವೆ. ಶಾಸಕ ಯತ್ನಾಳರು ಆಕ್ಷೇಪ ವ್ಯಕ್ತಪಡಿಸ್ತಾರೆ ಅಂತಾ ಬೊಮ್ಮಾಯಿಯವರ ಆಡಳಿತವನ್ನ ಬದಲಾವಣೆ ಮಾಡಿಕೊಳ್ಳೋಕೆ ಆಗೋದಿಲ್ಲ. ಬಹಳ ಉತ್ತಮವಾದ ಆಡಳಿತವನ್ನ ಬೊಮ್ಮಾಯಿಯವರು ಕೊಡ್ತಿದ್ದಾರೆ. ಹಗಲಿರುಳು ಶ್ರಮಿಸ್ತಿದ್ದಾರೆ. ಮುಂದಿನ ದಿನಗಳಲ್ಲಿ ಉತ್ತಮವಾದ ಆಡಳಿತವನ್ನ ನಾವು ನಿರೀಕ್ಷೆ ಮಾಡಿದ್ದೇವೆ ಎಂದರು. ಇದನ್ನೂ ಓದಿ: ಟ್ವಿಟ್ಟರ್ನಲ್ಲಿ ಅವಕಾಶ ಇಲ್ಲ, ಸಂಸತ್ನಲ್ಲೂ ಮಾತಾಡೋಕೆ ಬಿಡಲ್ಲ: ರಾಹುಲ್ ಗಾಂಧಿ
ವಿಜಯೇಂದ್ರ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಬಗ್ಗೆ ಯತ್ನಾಳರ ಹೇಳಿಕೆ ವೈಯಕ್ತಿಕವಾದುದು. ಬಿಎಸ್ ವೈ ಬಗ್ಗೆಯಾಗಲಿ, ವಿಜಯೇಂದ್ರ ಬಗ್ಗೆಯಾಗಲಿ ಪಕ್ಷದಲ್ಲಿ ಯಾವುದೇ ಅಸಮಾಧಾನ, ಅಸಹಕಾರ ಇಲ್ಲ. ಯಡಿಯೂರಪ್ಪನವರು ನಮ್ಮ ಪಕ್ಷದ ನಾಯಕರು. ವಿಜಯೇಂದ್ರ ನಮ್ಮ ಪಕ್ಷದ ಬಿಜೆಪಿಯ ರಾಜ್ಯದ ಉಪಾಧ್ಯಕ್ಷರು. ಆನಂದ್ ಸಿಂಗ್ ರಾಜೀನಾಮೆ ಕೊಡೋದಿಲ್ಲ. ನಾನು ನಿನ್ನೆ, ಮೊನ್ನೆ ಮಾತನಾಡಿದ್ದೇನೆ. ಸ್ವಲ್ಪ ಅಸಮಾಧಾನ ಇತ್ತು, ಎಲ್ಲವೂ ಸರಿಯಾಗುತ್ತೆ. ಮನೆಗೆ ಸೊಸೆ ಬಂದ್ಮೇಲೆ ಹದಿನೈದು ದಿನಗಳು ಅಥವಾ ಒಂದು ತಿಂಗಳಾದ್ರೂ ಗೊತ್ತು ಮಾಡಿಕೊಳ್ಳಬೇಕು. ಅವರ ನಡೆ, ನುಡಿ ಹೇಗಿದೆ ಅಂತಾ ನೋಡಬೇಕು. ಏನೂ ಗೊತ್ತಿಲ್ಲದೆ ಸಡನ್ ಆಗಿ ಹೋಗಿ ಮಾಡೋದು ಸರಿಯಲ್ಲ. ಪಕ್ಷದ ತತ್ವ ಸಿದ್ಧಾಂತಗಳಿಗೂ ಅದು ವಿರೋಧ ಆಗುತ್ತದೆ. ಪಕ್ಷದಲ್ಲಿದ್ದು ಮಾಡೋದು ಸರಿಯಲ್ಲ. ಅವರಿಗೆ ನೇರವಾಗಿ ಹೋಗಿ ಸಿಎಂ ಅವರನ್ನ ಕೇಳೋ ಅಧಿಕಾರವಿದೆ. ಅವರು ಶಾಸಕರಿದ್ದಾರೆ, ಹೋಗಿ ಕೇಳಲಿ. ಅದು ಬಿಟ್ಟು ಧರಣಿ ಮಾಡಿದ ತಕ್ಷಣ ಎಲ್ಲವೂ ಸರಿ ಹೋಗುತ್ತೆ ಅನ್ನೋದು ತಪ್ಪು ಎಂದು ಹೇಳಿದರು.