ಬೆಂಗಳೂರು: ನೆಲಮಂಗಲದ ರಸ್ತೆ ತಿರುವಿನಲ್ಲಿ ಭಾರೀ ಅಪಘಾತವೊಂದು ನಡೆದಿದೆ. ಅಪಘಾತದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ನೆಲಮಂಗಲ ತಾಲೂಕಿನ ರಾಯರಪಾಳ್ಯದ ಯೂ ಟರ್ನ್ನಲ್ಲಿ ಈ ಅಪಘಾತ ಸಂಭವಿಸಿದೆ. ಗಂಡ, ಹೆಂಡತಿ ಹಾಗೂ ಮೂರು ಚಿಕ್ಕ ಮಕ್ಕಳ ಕುಟುಂಬವೊಂದು ಬೆಂಗಳೂರಿನಿಂದ ಬೈಕಿನಲ್ಲಿ ದಾವಣೆಗೆರೆಗೆ ತೆರಳುತ್ತಿತ್ತು. ಅದೃಷ್ಟವಶಾತ್ ಎಲ್ಲರೂ ಪ್ರಾಣಪಾಯದಿಂದ ಪಾರಾಗಿದ್ದಾರೆ.
ರಾಯರಪಾಳ್ಯದ ಗೇಟ್ ಬಳಿ ಯೂ ಟರ್ನ್ನಲ್ಲಿ ಬೈಕ್ ಸ್ಕಿಡ್ ಆಗಿ ಮಕ್ಕಳು ಕೆಳಗೆ ಬಿದ್ದಿದ್ದಾರೆ. ಘಟನೆಯಲ್ಲಿ ಒಂದು ಮಗುವಿನ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ನಿಮ್ಹಾನ್ಸ್ ಗೆ ದಾಖಲು ಮಾಡಲಾಗಿದೆ.
ಇಡೀ ಕುಟುಂಬಕ್ಕೆ ಡಾಬಸ್ ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಒಂದು ಮಗುವಿಗೆ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕಳುಹಿಸಲಾಗಿದೆ. ರಸ್ತೆ ತಿರುವು ಹಾಗೂ ಸರ್ವಿಸ್ ರೋಡ್ ಅವ್ಯವಸ್ಥೆ ಹಿನ್ನೆಲೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.