ತುಮಕೂರು: ಕೋವಿಡ್ ನಿಂದ ಅನೇಕರ ಕುಟುಂಬಗಳು ಬೀದಿಗೆ ಬಿದ್ದಿವೆ. ಆತ್ಮೀಯರ ಅಗಲಿಕೆಯಿಂದ ಅನೇಕರು ಕಂಗಾಲಾಗಿದ್ದಾರೆ. ಕುಣಿಗಲ್ ತಾಲೂಕಿನಲ್ಲಿ ಹೀಗೆ ನೋವಿನ ಕಡಲಿಗೆ ಸಿಕ್ಕಿರುವ ಕೆಲವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಗುರುವಾರ ಭೇಟಿ ಮಾಡಿ ಸಾಂತ್ವನ ಹೇಳಿದರು.
ಕುಣಿಗಲ್ನ ಕೊತ್ತಗೆರೆಪಾಳ್ಯದ ಶಿವರಾಮ್ ವೃತ್ತಿಯಿಂದ ಅಂಬುಲೆನ್ಸ್ ಚಾಲಕರು. ಕೋವಿಡ್ ಸಮಯದಲ್ಲಿ ತಮ್ಮ ಪ್ರಾಣ ಪಣಕ್ಕಿಟ್ಟು, ನೂರಾರು ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಜೊತೆಗೆ ಸೋಂಕಿನಿಂದ ಸತ್ತ ಕೆಲವರ ಶವಗಳತ್ತ ವಾರಸುದಾರರು ತಿರುಗಿ ನೋಡದೇ ಹೋದಾಗ ಆ ಶವಗಳ ಅಂತ್ಯ ಸಂಸ್ಕಾರವನ್ನೂ ಇವರೇ ನೆರವೇರಿಸಿದರು. ಆದರೆ ವಿಧಿ ಇವರ ಬದುಕಿನಲ್ಲೇ ಆಟವಾಡಿಬಿಟ್ಟಿತು. ಗುರುತು ಪರಿಚಯ ಇಲ್ಲದ ಯಾರು, ಯಾರನ್ನೋ ಸಕಾಲಕ್ಕೆ ಆಸ್ಪತ್ರೆಗೆ ಸಾಗಿಸಿ ಪ್ರಾಣ ಉಳಿಸಿದ್ದ ಶಿವರಾಮ್ ಅವರಿಗೆ ಕೊರೊನಾ ಸೋಂಕಿಗೆ ಒಳಗಾದ ತಮ್ಮ ಪತ್ನಿ ಲಕ್ಷ್ಮಿದೇವಿ ಅವರನ್ನೇ ಉಳಿಸಿಕೊಳ್ಳಲು ಆಗಲಿಲ್ಲ. ಒಂದಷ್ಟು ದಿನ ಸೋಂಕಿನಿಂದ ನರಳಿದ ಅವರು ಕೊನೆಗೊಮ್ಮೆ ಕಣ್ಮುಚ್ಚಿದರು. ಇದನ್ನೂ ಓದಿ: ಅಪಘಾತವಾಗಿ ನರಳಾಡುತ್ತಿದ್ದ ಗಾಯಾಳು- ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಡಿಕೆಶಿ
ಡಿ.ಕೆ. ಶಿವಕುಮಾರ್ ಅವರು ಶಿವರಾಮ್ ಮನೆಗೆ ಭೇಟಿ ನೀಡಿದಾಗ ಶಿವರಾಮ್ ಕುಟುಂಬ ಸದಸ್ಯರ ದುಃಖದ ಕಟ್ಟೆಯೊಡೆಯಿತು. ಅವರೆಲ್ಲ ತಮ್ಮ ಅಳಲು ಹೇಳಿಕೊಂಡು ಗದ್ಗದಿತರಾದರು. ಅವರಿಗೆ ಸಾಂತ್ವನ ಹೇಳಿದ ಡಿ.ಕೆ. ಶಿವಕುಮಾರ್ ಧೈರ್ಯ ತುಂಬುವ ಪ್ರಯತ್ನ ಮಾಡಿದರು. ಸಾಂಕೇತಿಕವಾಗಿ 10 ಸಾವಿರ ಸಹಾಯ ಧನವನ್ನೂ ನೀಡಿದರು. ಅವರ ನೋವಿನಲ್ಲಿ ಭಾಗಿಯಾದ ಶಿವಕುಮಾರ್ ಭಾರವಾದ ಹೆಜ್ಜೆಯೊಡನೆ ಅಲ್ಲಿಂದ ತೆರಳಿದರು.