– ಗೋರಕ್ಷಣೆ ಬಗ್ಗೆ ಸರ್ಕಾರಕ್ಕೆ ಒತ್ತಾಯ
ಉಡುಪಿ: ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ 74ನೇ ಸ್ವಾತಂತ್ರೋತ್ಸವ ಆಚರಿಸಿದರು. ಚಾತುರ್ಮಾಸ್ಯ ವೃತಾಚರಣೆಯಲ್ಲಿರುವ ಶ್ರೀಗಳು ಪೇಜಾವರ ಮಠಕ್ಕೆ ಸಂಬಂಧಿಸಿದ ನೀಲಾವರ ಗೋಶಾಲೆಯಲ್ಲಿ ಧ್ವಜಾರೋಹಣ ನಡೆಸಿದರು.
ಈ ಸಂದರ್ಭದಲ್ಲಿ ಸ್ವಾಮೀಜಿ ಸ್ವಾತಂತ್ರ್ಯ ದಿನದ ಸಂದೇಶ ನೀಡಿದರು. ಪ್ರತಿಯೊಂದು ಗೋವು ಕೂಡ ಹುಟ್ಟಿನಿಂದ ಕೊನೆಯವರೆಗೂ ಪರಹಿತಕ್ಕಾಗಿ ಲೋಕದ ಒಳಿತಿಗಾಗಿಯೇ ಜೀವಿಸುತ್ತವೆ. ರಾಷ್ಟ್ರದ ಸುಭಿಕ್ಷೆ ಸಮೃದ್ಧಿಯನ್ನು ಬಯಸುವ ಸರಕಾರ ಹಾಗೂ ಪ್ರತಿಯೊಬ್ಬರೂ ಗೋವಿನ ಪೋಷಣೆಯನ್ನು ರಾಷ್ಟ್ರೀಯ ಕರ್ತವ್ಯ ಎಂದೇ ಪರಿಗಣಿಸಬೇಕು ಎಂದರು.
ಎಷ್ಟೇ ಕಷ್ಟ ಸವಾಲುಗಳು ಎದುರಾದರೂ ದೇಶದಲ್ಲಿ ಗೋವಿನ ರಕ್ಷಣೆಯ ಕಾರ್ಯದಿಂದ ಯಾರೊಬ್ಬರೂ ಹಿಂದೆ ಸರಿಯಲೇಬಾರದು. ಒಂದೊಮ್ಮೆ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಅದರಿಂದ ದೇಶಕ್ಕೆ ವಿಪತ್ತು ನಿಶ್ಚಿತ ಎಂದು ಪೇಜಾವರ ಶ್ರೀಗಳು ಹೇಳಿದರು.
ಪೇಜಾವರ ಮಠದ ಶಿಷ್ಯರು ನೀಲಾವರ ಗೋಶಾಲೆಯ ಸಿಬ್ಬಂದಿ ಈ ಸಂದರ್ಭದಲ್ಲಿ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದರು. ಧ್ವಜಸ್ತಂಭದ ಮುಂಭಾಗದಲ್ಲಿ ರಂಗೋಲಿಯ ಮೂಲಕ ಸಿಂಗಾರ ಮಾಡಲಾಗಿತ್ತು. ಕಾರ್ಯಕ್ರಮದ ಬಳಿಕ ಸಿಹಿತಿಂಡಿಯನ್ನು ವಿತರಣೆ ಮಾಡಲಾಯ್ತು, ಗೋಶಾಲೆಯ ವ್ಯವಸ್ಥಾಪಕ ನರಸಿಂಹ ಭಟ್, ಶ್ರೀಗಳ ಆಪ್ತ ಕಾರ್ಯದರ್ಶಿಗಳಾದ ಕೃಷ್ಣ ಭಟ್, ವಿಷ್ಣುಮೂರ್ತಿ ಆಚಾರ್ಯ, ಸಿಬಂದಿ ವರ್ಗ ಮತ್ತು ಶಾಸ್ತ್ರ ತರಗತಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.