– ಡಿಕೆಶಿ ಶಕ್ತಿ ಏನಿದೆ ಎನ್ನುವುದು ನನಗೆ ಗೊತ್ತಿದೆ ಅಂದ್ರು ಸಚಿವರು
ಕಲಬುರಗಿ: ಕೊರೊನಾ ವೈರಸ್ ಭೀತಿಯಿಂದ ಕೆಲವು ಕಡೆಗಳಲ್ಲಿ ಸಾರ್ವಜನಿಕರೇ ಸ್ವಯಂ ಲಾಕ್ ಡೌನ್ ಹೇರಿಕೊಂಡಿದ್ದಾರೆ. ಅಂತೆಯೇ ಗಾಣಗಾಪುರದ ಪ್ರಸಿದ್ಧ ದತ್ತಾತ್ರೇಯ ದೇವಸ್ಥಾನಕ್ಕೆ ಸಾರ್ವಜನಿಕರನ್ನು ನಿಷೇಧಿಸಲಾಗಿದೆ. ಆದರೆ ಇಂದು ಸಚಿವ ರಮೇಶ್ ಜಾರಕಿಹೊಳಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿರುವುದು ವಿವಾದಕ್ಕೀಡಾಗಿದೆ.
ಹೌದು. ಸಚಿವರು ಇಂದು ಬೆಳ್ಳಂಬೆಳಗ್ಗೆ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಸಚಿವರಿಗೆ ಸ್ಥಳೀಯ ಶಾಸಕರು ಹಾಗೂ ಬಿಜೆಪಿ ಮುಖಂಡರು ಸಾಥ್ ನೀಡಿದ್ದಾರೆ. ಈ ಮೂಲಕ ಸಚಿವರಿಗೊಂದು ನ್ಯಾಯ ಸಾರ್ವಜನಿಕರಿಗೊಂದು ನ್ಯಾಯನಾ ಎಂಬ ಪ್ರಶ್ನೆ ಎದ್ದಿದೆ.
ಗಾಣಗಾಪುರ ದತ್ತಾತ್ರೇಯ ದೇವಸ್ಥಾನಕ್ಕೆ ಸಾರ್ವಜನಿಕರ ದರ್ಶನಕ್ಕೆ ಈಗಾಗಲೇ ನಿಷೇಧ ಹೇರಲಾಗಿದೆ. ಆದರೆ ಇದೀಗ ನಿರ್ಬಂಧ ಇರುವ ದೇವಸ್ಥಾನಕ್ಕೆ ಸ್ಥಳೀಯ ಬಿಜೆಪಿ ಮುಖಂಡರ ಜೊತೆ ತೆರಳಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ದೇವರ ಸನ್ನಿಧಿಯಲ್ಲೂ ಸಚಿವರಿಗೊಂದು ನಿಯಮ, ಸಾರ್ವಜನಿಕರಿಗೊಂದು ನಿಯಮ. ಸಾರ್ವಜನಿಕರಿಗೆ ಇಲ್ಲದ ದರ್ಶನ ಭಾಗ್ಯ ಸಚಿವರಿಗೇಕೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಸಚಿವರಿಗೆ ನೀಡಿರುವ ಅವಕಾಶಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಜುಲೈ 7ರವರೆಗೆ ದತ್ತಾತ್ರೇಯ ದೇವಸ್ಥಾನ ಸಾರ್ವಜನಿಕರಿಗೆ ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆದರೆ ಇದೀಗ ಆದೇಶ ಉಉಲ್ಲಂಘಿಸಿ ಸಚಿವರಿಗೆ ದರ್ಶನಕ್ಕಷ್ಟೇ ಅವಕಾಶ ನೀಡಿರುವುದು ವಿವಾದಕ್ಕೀಡಾಗಿದೆ.
ಇದಕ್ಕೂ ಮೊದಲು ಸಚಿವರು ಅಫಜಲ್ಪುರ್ ತಾಲೂಕಿನ ಸೊನ್ನ ಬ್ಯಾರೇಜ್ ಗೆ ಭೇಟಿ ನೀಡಿ ಸೊನ್ನ ಬ್ಯಾರೇಜ್ ಬಳಿ ಮಾಧ್ಯಮಗಳೀಗೆ ಪ್ರತಿಕ್ರಿಯಿಸಿ, ಡಿಕೆ ಶಿವಕುಮಾರ್ ಜನರ ಮುಂದೆ ಅಧಿಕಾರ ಸ್ವೀಕರಿಸುತ್ತಿಲ್ಲ. ಬರಿ ಟಿವಿ ಮುಂದೆ ಪ್ರಮಾಣ ಸ್ವೀಕರಿಸುತ್ತಿದ್ದಾರೆ. ಇದಕ್ಕೆ ಮಹತ್ವ ಕೊಡಬೇಗಾಗಿಲ್ಲ. ಈಗ ಅವರು ಹತ್ತು ಲಕ್ಷ ಜನ ಅಂದ್ರು ಸುಮ್ಮನಿರಬೇಕಾಗಿದೆ ಎಂದರು.
ಡಿಕೆ ಶಿವಕುಮಾರ್ ಶಕ್ತಿ ಏನಿದೆ ಎನ್ನುವುದು ನನಗೆ ಗೊತ್ತಿದೆ. ಡಿಕೆಶಿ ನನ್ನ ಮಿತ್ರನಲ್ಲ. ಅವನೊಬ್ಬ ಒಂದು ಪಕ್ಷದ ಅಧ್ಯಕ್ಷ ಅಷ್ಟೇ. ನನಗೂ ಅವರಿಗೂ ಸಂಬಂಧ ಇಲ್ಲ. ಮದುವೆ ಅಂದ ಮೇಲೆ ಎಲ್ಲರು ಬರ್ತಾರೆ ಹಾಗಂತ ಅವರು ಎಲ್ಲರು ನಮ್ಮವರೇ ಅನ್ನೋಕೆ ಆಗುತ್ತಾ ಎಂದು ಪ್ರಶ್ನಿಸಿದರು.