– ಬಂಡೆಗಳ ಮೇಲೆ ಹತ್ತಿ ಫೋಟೋ ಕ್ಲಿಕ್
ಚಿಕ್ಕಮಗಳೂರು: ನಿಷೇಧದ ಮಧ್ಯೆಯೂ ಚಿಕ್ಕಮಗಳೂರು-ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿನಲ್ಲಿ ಪ್ರವಾಸಿಗರ ಸೆಲ್ಫಿ ಕ್ರೇಜ್ ಮುಂದುವರಿದಿದೆ.
ಕಳೆದೆರಡು ವರ್ಷಗಳಲ್ಲಿ ಚಾರ್ಮಾಡಿ ಮಾರ್ಗದಲ್ಲಿ ಸೆಲ್ಫಿ ಕ್ರೇಜಿಗೆ ಸಾವು-ನೋವು ಕೂಡ ಸಂಭವಿಸಿವೆ. ಕಳೆದ ವರ್ಷ ಕೂಡ ಪ್ರವಾಸಿಗನೋರ್ವ ಬಂಡೆ ಮೇಲಿಂದ ಜಾರಿ ಬಿದ್ದು ಕೈ ಮುರಿದುಕೊಂಡಿದ್ದ. ಈಗ ಈ ಮಾರ್ಗವಾಗಿ ಸಂಚರಿಸೋ ಪ್ರವಾಸಿಗರು ಮತ್ತದೇ ತಪ್ಪುಗಳನ್ನ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಮುಂಗಾರು ಆರಂಭಗೊಂಡಿದ್ದು, ಚಾರ್ಮಾಡಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. 22 ಕಿ.ಮೀ ಚಾರ್ಮಾಡಿಯ ಮಧ್ಯೆ ಅಲ್ಲಲ್ಲೇ ಸಣ್ಣ ಜಲಪಾತಗಳು ಸೃಷ್ಟಿಯಾಗಿವೆ. ಪ್ರವಾಸಿಗರು ಎಲ್ಲೆಂದರಲ್ಲಿ ಗಾಡಿ ನಿಲ್ಲಿಸಿ ಬಂಡೆಗಳ ಮೇಲೆ ಹತ್ತಿ ಸೆಲ್ಫಿ, ಫೋಟೋ ಸೆಷೆನ್ ನಡೆಸುತ್ತಿದ್ದಾರೆ.
ಅಷ್ಟೆ ಅಲ್ಲದೆ ಈ ಮಾರ್ಗದಲ್ಲಿ ಎಲ್ಲೂ ಸೆಲ್ಫಿ ತೆಗೆಯಲು ಅವಕಾಶವಿಲ್ಲ. ಚಾರ್ಮಾಡಿಯಲ್ಲಿ ಸೆಲ್ಫಿಗೆ ಸರ್ಕಾರ ನಿಷೇಧಿಸಿದೆ. ಆದರೆ ಪ್ರವಾಸಿಗರು ಅಪಾಯದ ಸ್ಥಳಗಲ್ಲಿ ಮತ್ತೆ ಬಂಡೆಗಳ ಮೇಲೆ ಹತ್ತಿ ಸೆಲ್ಫಿಗೆ ಮುಗಿ ಬೀಳುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.