ನವದೆಹಲಿ: ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಹಾಗೂ ನಿರ್ಮಾಪಕ ಆನಂದ್ ಅಪ್ಪುಗೋಳಗೆ ಇಡಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಬ್ಯಾಂಕ್ ಖಾತೆಯಲ್ಲಿದ್ದ ಹಣ ಮತ್ತು ಸ್ಥಿರಾಸ್ತಿ ಸೇರಿ ಒಟ್ಟು 31.35 ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಳಗಾವಿಯಲ್ಲಿ ಆನಂದ್ ಅಪ್ಪುಗೋಳ ಒಡೆತನದಲ್ಲಿರುವ ಹನುಮಾನ್ ನಗರದ ಬಂಗಲೆ, ಬಾಕ್ಸೈಟ್ ರಸ್ತೆಯಲ್ಲಿರುವ ಖಾಲಿ ನಿವೇಶನ, ಬಿ.ಕೆ ಬಾಳೆಕುಂದ್ರಿಯಲ್ಲಿನ ಮನೆ ಹಾಗೂ ನೆಹರು ನಗರದಲ್ಲಿರುವ ಕಚೇರಿ, ಬ್ಯಾಂಕ್ ಖಾತೆಯಲ್ಲಿದ್ದ ಹಣ ಸೇರಿ ಒಟ್ಟು 31.35 ಕೋಟಿ ಮೌಲ್ಯದ ಆಸ್ತಿಯನ್ನು ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ವಶಕ್ಕೆ ಪಡೆಯಲಾಗಿದೆ.
ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಕೊ ಆಪರೇಟಿವ್ ಸೊಸೈಟಿಯಲ್ಲಿ ಠೇವಣಿಯಿಟ್ಟಿದ್ದ ಸಾವಿರಾರು ಜನರ 250 ಕೋಟಿ ರೂ.ಗೂ ಅಧಿಕ ಮೊತ್ತವನ್ನು ದುರ್ಬಳಕೆ ಮಾಡಿದ ಆರೋಪ ಆನಂದ್ ಅಪ್ಪುಗೋಳ ಮೇಲಿದೆ. ಈತನ ವಿರುದ್ಧ ಹಲವರು ದೂರು ದಾಖಲಿಸಿದ್ದಾರೆ. ಹಲವು ಪ್ರಕರಣಗಳಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. ಇದೀಗ ಮತ್ತೆ ಇಡಿ ಅಧಿಕಾರಿಗಳು ಆಸ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಠೇವಣಿದಾರರ ಹಣದಲ್ಲಿ ಹಲವು ಆಸ್ತಿ, ಐಷಾರಾಮಿ ಬಂಗಲೆಗಳನ್ನು ಆನಂದ್ ಅಪ್ಪುಗೋಳ ಖರೀದಿಸಿದ್ದಾನೆ. ಇವೆಲ್ಲವನ್ನೂ ಹರಾಜು ಮಾಡಲು ಈ ಹಿಂದೆ ಬೆಳಗಾವಿ ಜಿಲ್ಲಾಡಳಿತ ಮುಂದಾಗಿತ್ತು. ಇದೀಗ ಜಾರಿ ನಿರ್ದೇಶನಾಲಯ ಇವನ್ನು ವಶಕ್ಕೆ ಪಡೆದಿದೆ.