ಮಡಿಕೇರಿ: ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ದೇಶದಲ್ಲಿ ಲಾಕ್ಡೌನ್ ಹೇರಿದ್ದ ಕೇಂದ್ರ ಸರ್ಕಾರವು ಹಂತ ಹಂತವಾಗಿ ನಿಯಮಗಳನ್ನ ಸಡಿಲಗೊಳಿಸುತ್ತಿದೆ. ಆದ್ರೂ ಸಾರಿಗೆ ಬಸ್ಸುಗಳಲ್ಲಿ ಓಡಾಡುವ ಪ್ರಯಾಣಿಕರ ಕೊರತೆ ಎದ್ದು ಕಾಡುತ್ತಿದೆ. ಸರ್ಕಾರವೇ ಲಾಕ್ಡೌನ್ ನಿಯಮ ಸಡಿಲಗೊಳಿಸಿ ರಾಜ್ಯ ಸಾರಿಗೆ ಬಸ್ಸುಗಳಲ್ಲಿ ಸಾಮಾಜಿಕ ಅಂತರವಿಲ್ಲದೆ ಓಡಾಡಬಹುದು. ಎಲ್ಲಾ ಸೀಟುಗಳಿಗೂ ಪೂರ್ಣ ಪ್ರಮಾಣದಲ್ಲಿ ಪ್ರಯಾಣಿಕರ ಹತ್ತಿಸಿಕೊಳ್ಳಬಹುದೆಂದು ಆದೇಶಿಸಿದೆ. ಆದರೂ ಕೊಡಗು ಜಿಲ್ಲೆಯಲ್ಲಿ ಮಾತ್ರ ಸಾರಿಗೆ ಬಸ್ಸುಗಳಿಗೆ ಪ್ರಯಾಣಿಕರೇ ಇಲ್ಲ.
ಮಂಜಿನ ನಗರಿ ಮಡಿಕೇರಿಯಿಂದ ರಾಜ್ಯದ ಎಲ್ಲಾ ಭಾಗಗಳಿಗೂ ನಿತ್ಯ ನೂರಾರು ಬಸ್ಸುಗಳು ಓಡಾಡುತ್ತವೆ. ಆದರೆ ಒಂದು ಬಸ್ಸಿಗೆ 15 ರಿಂದ 20 ಪ್ರಯಾಣಿಕರು ಹತ್ತಿದರೆ ಅದೇ ಹೆಚ್ಚು ಎಂದು ನಿಲ್ದಾಣ ನಿಯಂತ್ರಕರು ಹೇಳುತ್ತಾರೆ. ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಮಾಸ್ಕ್ ಧರಿಸುವುದು ಕಡ್ಡಾಯ. ಅದು ಬಿಟ್ಟರೆ, ಸಾಮಾಜಿಕ ಅಂತರವಿಲ್ಲದೆ ಎಲ್ಲಾ ಸೀಟುಗಳಲ್ಲೂ ಜನರು ಕುಳಿತುಕೊಳ್ಳುವುದಕ್ಕೆ ಅವಕಾಶ ನೀಡಲಾಗಿದೆ.
ಮೊದಲೆಲ್ಲಾ ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಯಾವುದೇ ಜಿಲ್ಲಾ ಕೇಂದ್ರಗಳಿಗೆ ಬಸ್ಸುಗಳು ಹೊರಟೆ ಐದು ನಿಮಿಷಕ್ಕೆ ಒಂದು ಬಸ್ಸಿಗೆ ಪ್ರಯಾಣಿಕರು ಫುಲ್ ಆಗುತ್ತಿದ್ದರು. ಆದರೀಗ ಎರಡು ಗಂಟೆ ಕಾಯ್ದರು ಒಟ್ಟು ಸೀಟಿನ ಅರ್ಧದಷ್ಟು ಜನರು ಹತ್ತುತ್ತಿಲ್ಲ.ಪೀಕ್ ಸಮಯದಲ್ಲಿ ಮಾತ್ರವೇ 20 ಜನರು ಬಸ್ಸೇರಬಹುದು. ಉಳಿದ ಸಮಯದಲ್ಲಿ ಕೇವಲ ನಾಲ್ಕೈದು ಜನರು ಮಾತ್ರವೇ ಪ್ರಯಾಣಿಕರು ಇರುತ್ತಾರೆ.