ಬಿಗ್ಬಾಸ್ ಸೀಸನ್-8 ಕಾರ್ಯಕ್ರಮ ಮುಗಿದ ನಂತರ ಮೊದಲ ಬಾರಿಗೆ ಕೆ.ಪಿ ಅರವಿಂದ್ ಲೈವ್ ಬಂದಿದ್ದು, ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ನೆಗೆಟಿವಿಟಿಗಳಿಗೆ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಪ್ರತಿ ಮಾತು ನನ್ನನ್ನು ಪ್ರತಿನಿಧಿಸುತ್ತದೆ. ಪಾಸಿಟಿವ್ ಆಗಿ ಯೋಚನೆ ಮಾಡೋಣ ಎಂದು ಹೇಳಿದ್ದಾರೆ.
ಮೊದಲನೇಯದಾಗಿ 75ನೇ ಸ್ವಾತಂತ್ರ್ಯ ದಿನದ ಶುಭಾಶಯಗಳನ್ನು ಎಲ್ಲರಿಗೂ ತಿಳಿಸಿದ ಅವರು, ನಂತರ ಪ್ರತಿದಿನ ನನಗಾಗಿ ಟೈಮ್ ಕೊಟ್ಟು, ಹಗಲು ರಾತ್ರಿ ವೋಟ್ ಮಾಡಿ ಫಿನಾಲೆ ತನಕ ಬರಲು ಸಹಾಯ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಾನು ಬಿಗ್ಬಾಸ್ ಮನೆಯಲ್ಲಿ ಕೇವಲ 2 ವಾರ ಇರುತ್ತೇನೆ ಎಂದು ಕೊಂಡಿದ್ದೆ. ಆದರೆ ನನ್ನ ನಿರೀಕ್ಷೆಗೂ ಮೀರಿ ನನ್ನನ್ನು ಫಿನಾಲೆ ತನಕ ಕರೆದುಕೊಂಡು ಹೋಗಿದ ನಿಮ್ಮೆಲ್ಲರಿಗೂ ನಾನು ಸದಾ ಚಿರಋಣಿ ಎಂದಿದ್ದಾರೆ.
ಇಷ್ಟು ದಿನ ನನ್ನ ರೇಸ್ಗೆ ಸಂಬಂಧಿಸಿದಂತೆ ಕೆಲವು ಕೆಲಸ ಇತ್ತು, ನನಗಾಗಿ ನನಗೆ ಕೊಂಚ ಸಮಯ ಬೇಕಾಗಿತ್ತು. ಹಾಗಾಗಿ ಲೈವ್ ಬರಲು ಸಾಧ್ಯವಾಗಲಿಲ್ಲ. ಯಾರು ಸಹ ಬೇಸರಗೊಳ್ಳಬೇಡಿ. ಆದರೆ ದಾಖಲೆಯಷ್ಟು ಬಂದಂತಹ ವೋಟ್ ನೋಡಿ ನನಗೆ ಬಹಳ ಸಂತಸವಾಗಿದೆ, ನೀವು ನೀಡಿದ ಸಪೋರ್ಟ್ನನ್ನು ನಾನು ಎಂದಿಗೂ ಮರೆಯುವುದಿಲ್ಲ. ಈ ಪ್ರೀತಿ ಸದಾ ಇರಲಿ. ಬಿಗ್ಬಾಸ್ ನನ್ನ ಜೀವನದಲ್ಲಿ ಬೆಸ್ಟ್ ಚಾಪ್ಟರ್ ಎಂದು ಹೇಳಿದ್ದಾರೆ.
ಇದೇ ವೇಳೆ ನಾನು ಇನ್ನೊಂದು ವಿಚಾರ ಹೇಳಲು ಬಯಸುತ್ತೇನೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದು ನೆಗೆಟಿವಿಟಿ ಸುದ್ದಿಗಳು ಹರಿದಾಡುತ್ತಿದೆ. ಅದಕ್ಕೆ ಯಾರು ಕೂಡ ತಲೆ ಕೆಡಿಸಿಕೊಳ್ಳಬೇಡಿ. ನನಗೆ ನಿಮ್ಮೆಲ್ಲರ ಸಪೋರ್ಟ್ ಅಪಾರವಾದದ್ದು ಹಾಗೂ ನಿಮ್ಮೆಲ್ಲರ ಮೇಲೆ ನನಗೆ ನಂಬಿಕೆ ಇದೆ. ನೆಗೆಟಿವಿಟಿಗೆ ಒಳಗಾಗಬೇಡಿ, ಆದಷ್ಟು ಪಾಸಿಟಿವ್ ವಿಚಾರಗಳನ್ನು ಹರಡಿ. ಪಾಸಿಟಿವಿಯಲ್ಲಿ ಶಕ್ತಿ ಇದೆ ಹಾಗೂ ಖುಷಿ ಇದೆ. ನಾನು ಒಬ್ಬ ಪಾಸಿಟಿವ್ ಮನುಷ್ಯ. ಪಾಸಿಟಿವಿಟಿಯನ್ನು ಪಾಲಿಸುತ್ತೇನೆ. ಅದೇ ರೀತಿ ನಿಮ್ಮ ಲೈಫ್ನಲ್ಲಿ ಕೂಡ ಪಾಸಿಟಿವಿಯನ್ನು ನೋಡಲು ಬಯಸುತ್ತೇನೆ ಎಂದಿದ್ದಾರೆ.
ಸಿನಿಮಾದಲ್ಲಿ ಚಾನ್ಸ್ ಸಿಕ್ಕಿದರೆ ಖಂಡಿತ ಮಾಡುತ್ತೇನೆ. ಬಿಗ್ಬಾಸ್ ಮುಗಿದು ಒಂದು ವಾರ ಆದರೂ ಎಲ್ಲೆಡೆ ನನ್ನ ಫೋಟೋ, ವೀಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದೀರಿ. ಇದನ್ನು ನಾನು ಕನಸಿನಲ್ಲಿಯೂ ನಿರೀಕ್ಷಿಸಿರಲಿಲ್ಲ. ಬಹಳ ಖುಷಿಯಾಗುತ್ತಿದೆ. ನಿಮ್ಮ ಸಪೋರ್ಟ್ ಮುಂದೆ ಕೂಡ ಹೀಗೆ ಇರಲಿ. ನಿಮ್ಮ ಪ್ರತಿ ಮಾತು ನನ್ನನ್ನು ಪ್ರತಿನಿಧಿಸುತ್ತದೆ. ಇದು ಸದಾ ನೆನಪಿರಲಿ. ಎಲ್ಲರಿಗೂ ಶುಭವಾಗಲಿ ಎನ್ನುತ್ತಾ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ:ವೈಷ್ಣವಿಗೆ ದೆವ್ವದ ಕಥೆ ಹೇಳಿದ ಅಕುಲ್ ಬಾಲಾಜಿ