ಬೀದರ್: ಕೊರೊನಾ ಸೋಂಕು ದೃಢಪಟ್ಟ ಕೂಡಲೇ ಜನರೆಲ್ಲಾ ಭಯಗೊಳ್ಳುತ್ತಿದ್ದಾರೆ. ಹೀಗಿರುವಾಗ ಅವರಿಗೆ ಧೈರ್ಯ ತುಂಬಿ ಸಂತೈಸಿ ಹೆಗಲು ಕೊಡುವವರು ಬೇಕಿತ್ತು. ಇದೇ ಸಮಯದಲ್ಲಿ ಬೀದರ್ ನ ವೈದ್ಯರ ತಂಡ ಕೊರೊನಾ ಸೋಂಕಿತರಿಗೆ ನಿಮ್ಮೊಂದಿಗೆ ನಾವಿದ್ದೇವೆಂದು ಧೈರ್ಯ ತುಂಬುವ ಕೆಲಸದಲ್ಲಿ ತೊಡಗಿಕೊಂಡಿದೆ. ಈ ಮೂಲಕ ರೋಗಿಗಳಿಗೆ ಆತ್ಮಸ್ಥೈರ್ಯ ಹೆಚ್ಚಿಸುವ ಕಾರ್ಯವಾಗುತ್ತಿದೆ.
ಕೊರೊನಾದಿಂದಾಗಿ ರಾಜ್ಯದೆಲ್ಲೆಡೆ ಉಂಟಾದ ಪರಿಸ್ಥಿತಿ ನೋಡಿ ಕೋವಿಡ್ ಪಾಸಿಟಿಟ್ ವರದಿ ಕೇಳಿದಾಕ್ಷಣ ಹೆದರುವ ಸ್ಥಿತಿ ಎದುರಾಗಿದೆ. ಇದನ್ನು ಅರಿತಿರುವ ಬೀದರ್ ನ ವೈದ್ಯರ ತಂಡವೊಂದು ಸೋಂಕಿತರನ್ನು ಸರಿಯಾಗಿ ಉಪಚರಿಸಿ ಅವರನ್ನು ನಗಿಸುವ ಕೆಲಸ ಮಾಡುತ್ತಿದೆ. ಇದರಿಂದ ಸೋಂಕಿನಿಂದ ಹೋರಾಡಬಹುದು ಎಂಬ ಧೈರ್ಯ ರೋಗಿಗಳಿಗೆ ಬಂದಿದೆ.
ವೈದ್ಯರ ತಂಡ ರೋಗಿಗಳಿಗೆ ನಿಮ್ಮ ಜೊತೆ ನಾವಿದ್ದೇವೆ, ಯಾವುದಕ್ಕೂ ಹೆದರಬೇಡಿ ಎಂದು ಸೋಂಕಿತರಿಗೆ ಅಭಯ ನೀಡಿದ್ದಾರೆ. ವೈದ್ಯರ ತಂಡ ನೀಡಿದ ಆತ್ಮಸ್ಥೈರ್ಯಕ್ಕೆ ಆಸ್ಪತ್ರೆಯ ಬೆಡ್ ಮೇಲೆಯೇ ಸೋಂಕಿತರು ಚಪ್ಪಾಳೆ ತಟ್ಟುವ ಮೂಲಕ ಖುಷಿಪಟ್ಟಿದ್ದಾರೆ. ಧೈರ್ಯವೊಂದೇ ರೋಗಕ್ಕೆ ಮದ್ದು ಎಂದು ತಾಲೂಕು ಆಸ್ಪತ್ರೆಯ ವೈದ್ಯರು ಸೋಂಕಿತರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ.