ಮೈಸೂರು: ಇಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಅವರಿಗೆ ಪ್ರತಿಭಟನೆಯ ಬಿಸಿ ತಟ್ಟಿತು. ಜಲದರ್ಶಿನಿಯಲ್ಲಿ ಅತಿಥಿಗೃಹದಲ್ಲಿ ಕೃಷಿ ಸಚಿವ ಬಿಸಿ ಪಾಟೀಲ್ ಮುಂದೆ ಪ್ರತಿಭಟಿಸಿದ ರೈತರು, ಸಚಿವರ ಮುಂದೆತೇ ತೂ, ಛೀ ಎಂದು ಉಗಿದರು.
ಯಾವ ಕಾಲದಲ್ಲಿ ಭತ್ತ ನಾಟಿ ಮಾಡುತ್ತಾರೆ ಅಂತಾ ಗೊತ್ತಿಲ್ಲ. ಸರ್ಕಾರಕ್ಕೆ ಸಾಮಾನ್ಯ ಜ್ಞಾನ ಇಲ್ಲ. ಜಿಲ್ಲಾಡಳಿತವನ್ನು ಕೇಳಿದರೆ ಸರ್ಕಾರ ಆದೇಶ ಮಾಡಬೇಕು ಅಂತಾರೆ. ಇದು ಅಕ್ಷಮ್ಯ ಅಪರಾಧ ಜವಾಬ್ದಾರಿ ಇಲ್ಲ ಅಂದರೆ ತೊಲಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಸಮಜಾಯಿಸಿ ನೀಡಲು ಮುಂದಾದ ಸಚಿವ ಬಿ.ಸಿ.ಪಾಟೀಲ್, ಹಾಗೆಲ್ಲಾ ಮಾತಾಡಬಾರದು ಎಂದರು.
ಆಗ ಮತ್ತಷ್ಟು ಆಕ್ರೋಶಗೊಂಡ ರೈತ ಮುಖಂಡ ಬಸವರಾಜು, ನಿಮ್ಮ ಮುಂದೆ ಕೈ ಮುಗಿದು ನಿಂತುಕೊಳ್ಳಬೇಕಾ? ನೀವೇನೂ ಆಕಾಶದಿಂದ ಬಂದಿದ್ದೀರಾ? ನೀವು ತಿನ್ನುತ್ತಾ ಇರೋದು ರೈತರ ಅನ್ನ. ನೀವು ಮಜಾ ಮಾಡ್ತಾ ಇರೋದು ರೈತರ ಅನ್ನ, ಹಸಿರು ಟವಲ್ ಹಾಕಿಕೊಂಡು ಮಾನ ಮರ್ಯಾದೆ ಕಳೆಯುತ್ತೀರಾ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಬೈದು ಅಲ್ಲಿಂದ ಹೊರಟರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಯಾವುದೋ ಕಾರಣದಲ್ಲಿ ಯಾವುದೋ ಒಂದು ಟೈಂ ಅಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅವರ ಆತ್ಮಹತ್ಯೆ ಆಗಬಾರದು ಅಂತಾನೆ ಹಲವು ಕಾರ್ಯಕ್ರಮ ಮಾಡುತ್ತಿದ್ದೇವೆ. ರೈತರು ಆತ್ಮಹತ್ಯೆ ಮಾಡಿಕೊಂಡ ತಕ್ಷಣ ಅವರ ಮನೆಗೆ ಹೋಗಿ ಹಾರ ಹಾಕಿದ್ರೆ. ಸಾಂತ್ವನ ಹೇಳಿದ್ರೆ ಆತ್ಮಹತ್ಯೆ ನಿಲ್ಲೋಲ್ಲ. ಅದಕ್ಕೆ ಪರ್ಯಾಯವಾಗಿ ಕಾರ್ಯಕ್ರಮ ರೂಪಿಸಬೇಕು ಎಂದರು.
ರೈತರ ಆತ್ಮಹತ್ಯೆಗೆ ಸರ್ಕಾರದ ನೀತಿಗಳು ಕಾರಣವಲ್ಲ. ವೀಕ್ ಮೈಂಡ್ ನಿಂದ ಕೆಲ ರೈತರು ಆತ್ಮಹತ್ಯೆ ಮಾಡಿಕೊಳ್ತಾರೆ. ಎಲ್ಲ ರೈತರು ಏನ್ ಆತ್ಮಹತ್ಯೆ ಮಾಡಿಕೊಂಡಿದ್ದಾರಾ? ಇಲ್ಲ ತಾನೆ. ರೈತರಷ್ಟೆ ಅಲ್ಲ ಬೇರೆ ಬೇರೆಯವರು ಆತ್ಮಹತ್ಯೆ ಮಾಡಿಕೊಳ್ತಾರೆ. ಉದ್ಯಮಿಗಳು, ಅಧಿಕಾರಿಗಳು ಹಾಗೂ ಇತರೇ ಕ್ಷೇತ್ರದ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಸರ್ಕಾರದ ನೀತಿಗಳು ಕಾರಣವಲ್ಲ ಎಂದು ತಿಳಿಸಿದ್ದಾರೆ.