ಬೆಂಗಳೂರು: ಬೈಕ್ ಅಪಘಾತದಿಂದಾಗಿ ಗಂಭೀರ ಗಾಯಗೊಂಡಿರುವ ನಟ ಸಂಚಾರಿ ವಿಜಯ್ ಅವರನ್ನು ನೆನೆದು ಸ್ಯಾಂಡಲ್ವುಡ್ ನಟ ನಿನಾಸಂ ಸತೀಶ್ ಅವರು ಕಣ್ಣೀರಿಟ್ಟಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನಿನಾಸಂ ಸತೀಶ್, ವಿಜಯ್ ಆದಷ್ಟು ಬೇಗ ಗುಣಮುಖರಾಗುತ್ತಾನೆ ಎಂದು ವೈದ್ಯರು ಹೇಳಿರುವುದಾಗಿ ನಾನು ಮಾಧ್ಯಮಗಳೊಂದಿಗೆ ನಿನ್ನೆ ಸುಳ್ಳು ಹೇಳಿದ್ದೆ. ಆದರೆ ಆತನ ಮೆದುಳಿಗೆ ಗಂಭೀರವಾದ ಏಟು ಬಿದ್ದಿದೆ. ಹಾಗಾಗಿ ವೈದ್ಯರು ತೀವ್ರವಾಗಿ ನಿಗವಹಿಸುತ್ತಿದ್ದಾರೆ. ಆತನ ಸ್ಥಿತಿ ತುಂಬಾ ಗಂಭೀರವಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. ಅವನು ವಾಪಸ್ ಬರುತ್ತಾನೆ ಎಂದು ಕಾಯುತ್ತಿದ್ದೇವೆ. ಆದರೆ ಈ ಪರಿಸ್ಥಿಗೆ ತಲುಪುತ್ತಾನೆ ಎಂದು ಯೋಚಿಸಿರಲಿಲ್ಲ ಎಂದು ಹೇಳಿ ಭಾವುಕರಾದರು. ಇದನ್ನೂ ಓದಿ: ಸಂಚಾರಿ ವಿಜಯ್ ಮೆದುಳು ನಿಷ್ಕ್ರಿಯವಾಗಿದೆ – ಅಪೋಲೋ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ
ಎಲ್ಲರಿಗೂ ಒಳ್ಳೆಯದಾಗಲಿ ಎಂದು ತುಂಬಾ ಕಷ್ಟಪಡುತ್ತಿದ್ದ. ಬರೀ ಸಿನಿಮಾ ಅಂತ ಅಲ್ಲ ಎಲ್ಲಾ ವಿಷಯಗಳಲ್ಲಿ ಕಷ್ಟ ಪಟ್ಟು ಮೇಲೆ ಬಂದಿದ್ದ. ಮನೆಯಲ್ಲಿ ಕೆಲಸ ಮಾಡಿ ಕಷ್ಟಪಟ್ಟು ಓದಿ ಹಲವು ಸಮಸ್ಯೆಗಳನ್ನು ಅನುಭವಿಸಿ ಮುಂದೆ ಬಂದಂತಹ ಹುಡುಗ ಅವನು. ಇದೀಗ ಈ ರೀತಿ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಾವು ಹತ್ತು ಹದಿನೈದು ದಿನಗಳ ಕಾಲ ಒಟ್ಟಿಗೆ ಇದ್ದೇವು. ಇದೀಗ ಅವನನ್ನು ಈ ಪರಿಸ್ಥಿತಿಯಲ್ಲಿ ನೋಡಲು ನನ್ನಿಂದ ಆಗುತ್ತಿಲ್ಲ. ನಾವಿಬ್ಬರು ಜೊತೆಗೆ ಕೊರೊನಾ ಕಷ್ಟಕಾಲದಲ್ಲಿ ಹಲವು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದೆವು, ಇದೀಗ ಅವನ ಈ ಸ್ಥಿತಿಯಿಂದ ಆ ನೋವನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ ದು:ಖ ತೋಡಿಕೊಂಡರು.