ಬೆಂಗಳೂರು: ಯಾರು ಎಲ್ಲಿಗೆ ಬೇಕಾದರೂ ಹೋಗಲಿ. ರಾಜಕೀಯವಾಗಿ ನಾವು ಮಾಡಿದ್ದೇ ನಾವು ಅನುಭವಿಸಿದ್ದೇವೆ. ನಾವು ಪವರ್ ಬೆಗ್ಗರ್ಸ್ ಬಗ್ಗೆ ಮಾತನಾಡಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ವಿಜಯೇಂದ್ರ ದೆಹಲಿ ಭೇಟಿ ವಿಚಾರದ ಕುರಿತು ಪ್ರತಿಕ್ರಿಯಿಸಿ, ಇವರೆಲ್ಲರು ಪವರ್ ಬೆಗ್ಗರ್ಸ್. ಈ ಪವರ್ ಬೆಗ್ಗರ್ಸ್ ಬಗ್ಗೆ ಮಾತನಾಡುವುದು ಬೇಡ. ಯಡಿಯೂರಪ್ಪ ಎಲ್ಲರನ್ನ ಕರೆತಂದ್ರು. ಈಗ ಅವರೇ ಅನುಭವಿಸುತ್ತಿದ್ದಾರೆ. ಯಾರು ಎಲ್ಲಿಗೆ ಬೇಕಾದರೂ ಹೋಗಲಿ ಎಂದರು.
ಉತ್ತರಕರ್ನಾಕದ ರೈತರ ಪರಿಸ್ಥಿತಿ ಅಯೋಮಯ. ಅವರನ್ನ ಯಾರು ಕಾಪಾಡಬೇಕೋ ಗೊತ್ತಿಲ್ಲ. ನಾನು ಖುದ್ದಾಗಿ ನಿನ್ನೆ ಅಲ್ಲಿ ಭೇಟಿ ಮಾಡಿದ್ದೇನೆ. ನಾನು ಸಿಎಂಗೆ ಮನವಿ ಮಾಡ್ತೇನೆ. ರೈತರ ತರಕಾರಿ, ಹೂ ಎಲ್ಲವನ್ನ ನೀವೇ ಖರೀದಿ ಮಾಡಿ. ಎಷ್ಟು ದರಕ್ಕೆ ಖರೀದಿ ಮಾಡ್ತೀರೋ ಮಾಡಿ. ಕೃಷಿ, ತೋಟಗಾರಿಕೆ ಇಲಾಖೆಯಿಂದ ಖರೀದಿಸಿ ಎಂದು ಹೇಳಿದರು. ಇದನ್ನೂ ಓದಿ: ಇಂದು ಬೆಳಗ್ಗೆ ದೆಹಲಿಗೆ ವಿಜಯೇಂದ್ರ ದಿಢೀರ್ ಆಗಮನ
ಸರ್ಕಾರದ ಪ್ಯಾಕೇಜ್ ಘೋಷಣೆ ವಿಚಾರದ ಸಂಬಂಧ ಮಾತನಾಡಿ, ಇದು ರಿಯಲ್ ಪ್ಯಾಕೇಜ್ ಅಲ್ಲ, ರೀಲ್ ಪ್ಯಾಕೇಜ್. ಅಸಂಘಟಿತ ಕಾರ್ಮಿಕರು, ನೇಕಾರ, ಕುಂಬಾರರಿದ್ದಾರೆ. ಯಾರು ಪರಿಹಾರಕ್ಕೆ ಅರ್ಜಿ ಹಾಕ್ತಾರೆ. ನಿಜವಾಗಿ ಸಂಕಷ್ಟಕ್ಕೊಳಗಾದವರು ಅರ್ಜಿ ಹಾಕೋಕೆ ಆಗುತ್ತಾ..? ಅವರಿಗೆ ಏನು ಎತ್ತ ಅನ್ನೋದೇ ಗೊತ್ತಾಗಲ್ಲ. ಯಾವ ಆನ್ ಲೈನ್ ಅರ್ಜಿ ಹಾಕೋಕೆ ಸಾಧ್ಯ. ಇದೆಲ್ಲ ಗೊತ್ತಿದ್ದರೆ ವಿಧಾನಸೌಧಕ್ಕೆ ಬಂದು ಕೆಲಸ ಮಾಡ್ತಿದ್ರು. ಗೊತ್ತಿಲ್ಲದ್ದಕ್ಕೆ ತಾನೇ ಬೀದಿಬದಿಯಲ್ಲಿ ವ್ಯಾಪಾರ ಮಾಡ್ತಿರೋದು. ನಿನ್ನೆ ಸಿನಿಮಾದವರು ನನ್ನನ್ನ ಭೇಟಿ ಮಾಡಿದ್ರು. ಅವರ ನೋವು, ದುಃಖ ಎಲ್ಲವನ್ನೂ ಹೇಳಿದ್ರು ಎಂದು ಡಿಕೆಶಿ ತಿಳಿಸಿದರು.
ದೇವೇಗೌಡರು ಪ್ರಧಾನಿಯಾಗಿ 25 ವರ್ಷ ಪೂರೈಸಿದ್ದಾರೆ. ಅವರದ್ದು ಹೋರಾಟದ ಬದುಕು. ದೆಹಲಿಯಲ್ಲಿ ದಕ್ಷಿಣ ಭಾರತದವರು ಉತ್ತರ ಭಾರತದವರ ಎದುರು ರಾಜಕಾರಣ ಮಾಡುವುದು ಸುಲಭವಲ್ಲ. ಅಂತದ್ದರಲ್ಲಿ ಇವರು ಪ್ರಧಾನಿಯಾಗಿದ್ದರು. ರಾಜ್ಯದ ದುಃಖ ದುಮ್ಮಾನಗಳಿಗೆ ಧ್ವನಿಯಾಗಿದ್ರು. ಅವರ ಉತ್ಸಾಹವನ್ನ ನಾನು ಸ್ವಾಗತಿಸುತ್ತೇನೆ ಎಂದರು.
ಕೊರೊನಾ ಸಾವಿನ ಬಗ್ಗೆ ಸುಳ್ಳು ಅಂಕಿ-ಅಂಶ ಕೊಡ್ತಿಲ್ಲ ಎಂಬ ಸುಧಕಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಸುಧಕಾರ್ ಅಣ್ಣಾ ನೀನು ಔಷಧಿ ಕೊಡಿಸೋದನ್ನ ನೋಡು. ಡೆತ್ ಆಡಿಟ್ ಕೆಲಸ ನಿನಗೆ ಬೇಡ. ಅದಕ್ಕೆ ಮುನ್ಸಿಪಲ್, ರೆವಿನ್ಯೂ ಡಿಪಾಟ್ರ್ಮೆಂಟ್ ಇದೆ ನೋಡಿಕೊಳ್ಳುತ್ತೆ. ಔಷಧಿ ವ್ಯಾಕ್ಸಿನ್ ನೋಡಿಕೊ, ಅದನ್ನ ಕೊಡಿಸೋ ಕೆಲಸ ಮಾಡು. ರಾಜಸ್ಥಾನದಲ್ಲಿ ಡೆತ್ ಆಡಿಟ್ ಮಾಡಿಸ್ತಿದ್ದಾರೆ, ನೀವು ಬಿಡುಗಡೆ ಮಾಡಿ ಎಂದು ಆಗ್ರಹಿಸಿದರು.