ಮೈಸೂರು: 2020ರ ಮೈಸೂರು ದಸರಾದಲ್ಲಿ ಭಾಗಿಯಾಗಿರುವ ಆನೆಗಳ ಮಾವುತರು ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲು ನಿರಾಕರಿಸಿದ್ದಾರೆ. ನಾವು ಕಾಡಿನ ಜನ ನಮಗೆ ಯಾವ ರೋಗವೂ ಇಲ್ಲ ಎಂದಿದ್ದರು.
ದಸರಾ ಭಾಗಿಯಾಗುವ ಆನೆಗಳ ಮಾವುತರು ಹಾಗೂ ಕಾವಾಡಿಗರಿಗೆ ಮುನ್ನೆಚ್ಚರಿಕ ಕ್ರಮವಾಗಿ ಕೊರೊನಾ ಟೆಸ್ಟ್ ಮಾಡಲು ಜಿಲ್ಲಾಡಳಿತ ಮುಂದಾಗಿತ್ತು. ಆದರೆ ನಮಗೆ ರೋಗ ಲಕ್ಷಣ ಇದ್ದರೆ ಟೆಸ್ಟ್ ಮಾಡಿಸೋಣ ರೋಗ ಇಲ್ಲದಿದ್ದರೆ ಯಾಕೆ? ಏಕೆ ಎಂದು ಪ್ರಶ್ನಿಸಿ ಯಾವುದೇ ಟೆಸ್ಟ್ ಮಾಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ವಾದ ಮಂಡಿಸಿದ್ದರು.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಅವರು ಕೊರೊನಾ ಪರೀಕ್ಷೆ ಕುರಿತು ಜಾಗೃತಿ ಮೂಡಿಸಿ ಮಾವುತರ ಮನವೊಲಿಸಿದರು. 5 ಆನೆಗಳ ಮಾವುತ, ಕಾವಾಡಿ ಹಾಗೂ ಸಹಾಯಕ ಸಿಬ್ಬಂದಿ ಸೇರಿದಂತೆ 15ಕ್ಕೂ ಹೆಚ್ಚು ಮಂದಿ ಕೊರೊನಾ ಟೆಸ್ಟ್ಗೆ ಮಾಡಿಸಿಕೊಂಡರು. ಇಂದು ಸಂಜೆಯೊಳಗೆ ಮಾವುತ ಕಾವಾಡಿಗಳ ಕೊರೊನಾ ರಿಸಲ್ಟ್ ಬರುವ ಸಾಧ್ಯತೆ ಇದೆ.
ಇತ್ತ ಕೊರೊನಾ ಪರೀಕ್ಷೆ ವರದಿ ಬಂದ ನಂತರವಷ್ಟೇ ಮುಂದಿನ ತಾಲೀಮಿನ ಬಗ್ಗೆ ನಿರ್ಧಾರ ಮಾಡಲು ಚಿಂತನೆ ನಡೆಸಿದ್ದು, ಅರಮನೆಗೆ ಬಂದ ಮೇಲೆ ದಸರಾ ಮುಗಿಯುವವರೆಗೂ ಮಾವುತರು, ಆನೆಗಳು ಹೊರಗಡೆ ಹೋಗಲ್ಲ. ಆನೆಗಳಿಗೆ ಕೊರೊನಾ ಟೆಸ್ಟ್ ಸದ್ಯಕ್ಕೆ ಮಾಡಿಸಲ್ಲ. ಆನೆಗಳಿಗೆ ಅನಾರೋಗ್ಯ ಕಂಡು ಬಂದರೆ ಮಾತ್ರ ಟೆಸ್ಟ್ ಮಾಡಿಸುತ್ತೇವೆ. ಆನೆಗಳಿಗೆ ಟೆಸ್ಟ್ ಮಾಡಿಸುವ ಕಿಟ್ಗಳಿಲ್ಲ ಅದಕ್ಕೂ ಬೇಡಿಕೆ ಇಟ್ಟಿದ್ದೇವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.