– ಕಿಸಾನ್ ಸಮ್ಮಾನ್ ಅನುಷ್ಠಾನ ಹಾಗೂ ಅನುಕೂಲ ಕುರಿತು ಚರ್ಚೆ
ಕೋಲಾರ : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅನುಷ್ಠಾನ ಹಾಗೂ ಅನುಕೂಲಗಳ ಕುರಿತು ನಾಳೆ ರೈತರರೊಂದಿಗೆ ಮೋದಿ ವಿಡಿಯೋ ಸಂವಾದ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಿಂದ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಜುಂಜನಹಳ್ಳಿಯ ರೈತ ಚಂದ್ರಪ್ಪ ಜೊತೆ ಮೋದಿ ಚರ್ಚೆ ನಡೆಸಲಿದ್ದಾರೆ.
ನಾಳೆ ಕಿಸಾನ್ ಸಮ್ಮಾನ್ ಯೋಜನೆಯ 7ನೇ ಕಂತಿನ 18 ಸಾವಿರ ಕೋಟಿ ರೂಪಾಯಿ 9 ಕೋಟಿ ರೈತರ ಖಾತೆಗೆ ಹಣ ಜಮಾ ಆಗಲಿದೆ. ಹೀಗಾಗಿ ಯೋಜನೆಯ ಉಪಯೋಗಗಳು ಸ್ಥಳೀಯ ರೈತರ ಸಮಸ್ಯೆಗಳು ಸೇರಿದಂತೆ ಹಲವು ವಿಚಾರಗಳ ಕುರಿತು ಮೋದಿಯವರೊಂದಿಗೆ ರೈತ ಚಂದ್ರಪ್ಪ ಬೆಂಗಳೂರಿನ ನಬಾರ್ಡ್ ಬ್ಯಾಂಕ್ನಲ್ಲಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ವಿಡಿಯೋ ಸಂವಾದ ನಡೆಸಲಿದ್ದಾರೆ.
ನಾಳೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನದ ಹಿನ್ನೆಲೆಯಲ್ಲಿ, ದೇಶದ 6 ರಾಜ್ಯದ ರೈತರ ಜೊತೆಗೆ ವಿಡಿಯೋ ಸಂವಾದ ನಡೆಸಲಿದ್ದಾರೆ. 6 ರಾಜ್ಯದಲ್ಲಿ ಒಂದಾದ ಕರ್ನಾಟಕ ರಾಜ್ಯದಿಂದ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ರಾಜ್ಯದ ಪರವಾಗಿ ಕೋಲಾರದ ರೈತ ಚಂದ್ರಪ್ಪ ಭಾಗವಹಿಸಲಿದ್ದಾರೆ.
ನಾನು ಮೂಲತಃ ರೈತಾಪಿ ಕುಟುಂಬದವರಾಗಿದ್ದು, ಮೋದಿ ಜೊತೆಗೆ ವಿಡಿಯೋ ಸಂವಾದಕ್ಕೆ ಸಿಕ್ಕಿರುವುದು ನನ್ನ ಅದೃಷ್ಟ, ಜಿಲ್ಲೆಯ ರೈತರು ಹಾಗೂ ರಾಜ್ಯದ ರೈತರ ಸಮಸ್ಯೆಗಳ ಬಗ್ಗೆ ಮೋದಿ ಗಮನ ಸೆಳೆಯುತ್ತೇನೆ. ಇದೆ ವೇಳೆ ಅವಕಾಶ ಸಿಕ್ಕರೆ ಎಪಿಎಂಸಿ ಕಾಯ್ದೆ ಹಾಗೂ ಭೂ ಸುಧಾರಣಾ ಕಾಯ್ದೆಗಳನ್ನು ಮರು ಪರಿಶೀಲನೆ ಮಾಡುವಂತೆ ಕೂಡ ಮನವಿ ಮಾಡಲಿದ್ದೇನೆ ಎಂದು ಚಂದ್ರಪ್ಪ ಹೇಳಿದ್ದಾರೆ.