ಮಡಿಕೇರಿ: ರಣಭೀಕರ ಮಳೆಗೆ ತಲಕಾವೇರಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ, ಅರ್ಚಕ ನಾರಾಯಣ್ ಆಚಾರ್ ಅವರ ಕುಟುಂಬ ಮೃತಪಟ್ಟು ಎರಡು ತಿಂಗಳೇ ಕಳೆದಿದೆ. ಆದರೆ ಇಂದಿಗೂ ಅವರ ಮಕ್ಕಳಿಗೆ ಸರ್ಕಾರದ ಪರಿಹಾರ ಸಿಕ್ಕಿಲ್ಲ. ನಾರಾಯಣ ಆಚಾರ್ ಅವರ ಮಕ್ಕಳಾದ ಶಾರದಾ ಆಚಾರ್ ಮತ್ತು ನಮಿತಾ ಆಚಾರ್ ಇಬ್ಬರಿಗೂ ತಲಾ ಎರಡುವರೆ ಲಕ್ಷದಂತೆ ಪರಿಹಾರದ ಚೆಕ್ ವಿತರಿಸಲಾಗಿತ್ತು. ಅವರು ಮತಾಂತರಗೊಂಡು ಅವರ ಹೆಸರುಗಳನ್ನು ಬದಲಾಯಿಸಿಕೊಂಡಿದ್ದರಿಂದ ಹೆಸರು ಬದಲಾವಣೆಯಲ್ಲಿ ಗೊಂದಲವಾಗಿ ಇಂದಿಗೂ ಪರಿಹಾರದ ಹಣವನ್ನು ಪಡೆಯಲು ಸಾಧ್ಯವಾಗಿಲ್ಲ.
ತಂದೆ ನಾರಾಯಣ್ ಆಚಾರ್ ಮತ್ತು ಕುಟುಂಬ ಭೂಕುಸಿತದಲ್ಲಿ ಕಣ್ಮರೆಯಾಗುತ್ತಿದ್ದಂತೆ ಆಸ್ಟ್ರೇಲಿಯಾದಿಂದ ಬಂದಿದ್ದ ಇಬ್ಬರು ಹೆಣ್ಣುಮಕ್ಕಳು ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಶಾರದಾ ಆಚಾರ್ ಮತ್ತು ನಮಿತಾ ಆಚಾರ್ ಅವರ ಮಕ್ಕಳಾದ ನಮ್ಮ ತಂದೆ ತಾಯಿ ಕಣ್ಮರೆಯಾಗಿದ್ದರು ಎಂದು ದೂರು ನೀಡಿದ್ದರು. ಭೂಕುಸಿತವಾಗಿ ಮೂರು ದಿನಗಳಲ್ಲಿ ಅರ್ಚಕ ನಾರಾಯಣ ಆಚಾರ್ ಅವರ ಮೃತದೇಹ ದೊರೆತಿತ್ತು. ಹೀಗಾಗಿ ಸರ್ಕಾರ ಐದು ಲಕ್ಷ ರೂಪಾಯಿ ಘೋಷಣೆ ಮಾಡಿ ಇಬ್ಬರು ಹೆಣ್ಣುಮಕ್ಕಳಿಗೆ ತಲಾ ಎರಡೂವರೆ ಲಕ್ಷದಂತೆ ಪರಿಹಾರದ ಚೆಕ್ ನೀಡಿದ್ದರು.
ಚೆಕ್ ಸ್ವೀಕರಿಸಿದ ಇಬ್ಬರು ನಮ್ಮ ಹೆಸರು ಬದಲಾಗಿದೆ ಎಂದು ಮಡಿಕೇರಿ ತಹಶೀಲ್ದಾರ್ ಅವರಿಗೆ ಚೆಕ್ ವಾಪಸ್ ಮಾಡಿದ್ದರು. ಆಗಲೇ ಇಬ್ಬರು ಮತಾಂತರಗೊಂಡಿದ್ದಾರೆ ಅನ್ನೋ ವಿಷಯ ಗೊತ್ತಾಗಿತ್ತು. ಚೆಕ್ ನಲ್ಲಿ ಶಾರದಾ ಆಚಾರ್ ಮತ್ತು ನಮಿತಾ ಆಚಾರ್ ಎಂದು ನಮೂದಿಸಿದ್ದರೆ, ಅವರ ದಾಖಲೆ, ಬ್ಯಾಂಕ್ ಪಾಸ್ ಬುಕ್ಗಳಲ್ಲಿ ಶೆನೋನ್ ಫರ್ನಾಂಡಿಸ್ ಮತ್ತು ನಮಿತಾ ನಜೇರತ್ ಎಂದು ಹೆಸರಿದೆ. ಹೀಗಾಗಿ ಇಂದಿಗೂ ಅವರು ಪರಿಹಾರದ ಹಣವನ್ನು ಪಡೆಯಲು ಸಾಧ್ಯವಾಗಿಲ್ಲ. ತಹಶೀಲ್ದಾರ್ ಅವರನ್ನು ಕೇಳಿದರೆ ಅವರು ಇಂದಿಗೂ ಸರಿಯಾದ ದಾಖಲೆಗಳನ್ನು ನೀಡಿಲ್ಲ. ಫಾಸ್ಪೋರ್ಟ್ ನಲ್ಲೂ ಬೇರೆ ಹೆಸರಿದ್ದು, ಮೂಲ ದಾಖಲೆಗಳನ್ನು ನೀಡುವಂತೆ ಸೂಚಿಸಿದ್ದೇವೆ. ಸೋಮವಾರ ದಾಖಲೆಗಳನ್ನು ನೀಡಿದರೆ, ತಕ್ಷಣದಲ್ಲೇ ಪರಿಹಾರದ ಚೆಕ್ ಕ್ಲಿಯರ್ ಆಗಲಿದೆ ಎಂದಿದ್ದಾರೆ.
ಇನ್ನು ಉಸ್ತುವಾರಿ ಸಚಿವರನ್ನು ಭೇಟಿಯಾದ ನಿಮಿತಾ ಆಚಾರ್ ಮತ್ತು ಶಾರದಾ ಆಚಾರ್ ಪರಿಹಾರದ ಹಣವನ್ನು ನೀಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಯಿಸಿರುವ ಉಸ್ತುವಾರಿ ಸಚಿವ ವಿ ಸೋಮಣ್ಣ, ಅಂತ ಪುಣ್ಯಾತ್ಮನೇ ಹೋದ ಮೇಲೆ ಚೆಕ್ ನೀಡಿದರೆ ಏನು ಪ್ರಯೋಜನ. ಆದರೂ ಜಿಲ್ಲಾಧಿಕಾರಿಗೆ ಈ ವಿಷಯ ತಿಳಿಸಿದ್ದೇನೆ ಕೂಡಲೇ ಸಮಸ್ಯೆ ಬಗೆಹರಿಯುವುದು ಎಂದು ಹೇಳಿದ್ದಾರೆ.