ಬೆಂಗಳೂರು: ಬಿಜೆಪಿ ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಕೂಗು ಕೇಳಿ ಬಂದ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ಅವರು ಇಂದು ದೆಹಲಿಗೆ ತೆರಳುತ್ತಿದ್ದಾರೆ.
ಇವತ್ತು ಮಧ್ಯಾಹ್ನ ದೆಹಲಿಗೆ ಹೋಗುತ್ತಿರುವ ಸಿಎಂ ಅಲ್ಲೇ 3 ದಿನ ವಾಸ್ತವ್ಯ ಹೂಡಲಿದ್ದಾರೆ. ಪುತ್ರನ ಹಸ್ತಕ್ಷೇಪದಿಂದ ಬೇಸತ್ತಿರುವ ಕೆಲವು ಶಾಸಕರು, ಸಚಿವರು ಸಿಎಂ ತಲೆದಂಡಕ್ಕೆ ಆಗ್ರಹಿಸುತ್ತಿರುವ ಹೊತ್ತಲ್ಲಿ ಸಿಎಂ ದೆಹಲಿ ಭೇಟಿ ಕುತೂಹಲ ಮೂಡಿಸಿದೆ. ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 70ನೇ ವರ್ಷದ ಜನ್ಮ ದಿನ ಹಿನ್ನೆಲೆ ಬಿಎಸ್ವೈ ಭೇಟಿ ಮಾಡಿ ಶುಭ ಕೋರುವ ಸಾಧ್ಯತೆ ಇದೆ.
ಕೊರೊನಾ ಹಿನ್ನೆಲೆ ಗಣ್ಯರ ಭೇಟಿಗೆ ಪ್ರಧಾನಿಯವರು ನಿರಾಕರಿಸಿದ್ದು, ಒಂದು ವೇಳೆ ಅವಕಾಶ ಸಿಕ್ಕಲ್ಲಿ ಮೋದಿಯವರನ್ನು ಭೇಟಿ ಮಾಡುವ ಸಾಧ್ಯತೆಗಳಿದೆ. ಮತ್ತೊಂದೆಡೆ ಸಂಪುಟ ವಿಸ್ತರಣೆ ಚಾಲೆಂಜ್ ಕೂಡ ಬಿಎಸ್ವೈ ಎದುರಿಗಿದೆ. ಹೈಕಮಾಂಡ್ ಭೇಟಿ ವೇಳೆ ಸಂಪುಟ ವಿಸ್ತರಣೆನಾ ಅಥವಾ ಪುನಾರಚನೆನಾ ಅನ್ನೋ ಬಗ್ಗೆ ಚರ್ಚೆ ಮಾಡಲಿದ್ದಾರೆ. ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆಗಳೇ ಹೆಚ್ಚು ಎನ್ನಲಾಗಿದೆ. ಸದ್ಯ 6 ಸ್ಥಾನಗಳು ಖಾಲಿ ಇದ್ದು 4 ಸ್ಥಾನಗಳನ್ನು ಭರ್ತಿ ಮಾಡುವ ಸಾಧ್ಯತೆ ಇದೆ.
ಸಚಿವ ಸ್ಥಾನಕ್ಕಾಗಿ ಎಂಟಿಬಿ, ಯೋಗೇಶ್ವರ್, ವಿಶ್ವನಾಥ್, ಶಂಕರ್, ಕತ್ತಿ, ನಿರಾಣಿ, ರೇಣುಕಾಚಾರ್ಯ, ತಿಪ್ಪಾರೆಡ್ಡಿ, ಯತ್ನಾಳ್, ಸುನೀಲ್ ಕುಮಾರ್, ಲಿಂಬಾವಳಿ ಸೇರಿ ಪಟ್ಟಿ ದೊಡ್ಡದಿದೆ. ಸಿಎಂ ದೆಹಲಿ ಭೇಟಿಗೂ ಮುನ್ನ ಸಚಿವ ರಮೇಶ್ ಜಾರಕಿಹೋಳಿ ಇಲಾಖೆ ಕಾರ್ಯದ ನೆಪದಲ್ಲಿ ದೆಹಲಿ ತೆರಳಿದ್ದು ಡಿಸಿಎಂ ಸ್ಥಾನಕ್ಕೆ ಲಾಬಿ ನಡೆಸಿದ್ದಾರೆ. ನಿರಾಣಿ, ರೇಣುಕಾಚಾರ್ಯ ಕೂಡ ದೆಹಲಿಯಲ್ಲೇ ಇದ್ದು ಮಂತ್ರಿಗಿರಿಗಾಗಿ ಲಾಬಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ