– ಎಸ್ ಅಂಗಾರ, ನಾನು ಹಿರಿಯರಿದ್ದೇವೆ
ಮಡಿಕೇರಿ: ಐದು ಬಾರಿ ಶಾಸಕನಾಗಿ ಗೆದ್ದು 23 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಸಚಿವ ಸಂಪುಟ ಪುನರ್ ರಚನೆಯೋ ಅಥವಾ ವಿಸ್ತರಣೆ ಆಗುವುದೊ ಗೊತ್ತಿಲ್ಲ. ಅದಾದ ಬಳಿಕ ಸಂಪುಟದಲ್ಲಿ ಸ್ಥಾನದ ಬಗ್ಗೆ ಹೇಳಬಲ್ಲೆ. ರಾಜ್ಯ ಸಮಿತಿ ಕೇಂದ್ರಕ್ಕೆ ನೀಡಿರುವ ಹೆಸರುಗಳ ವರದಿಯನ್ನು ನಾನು ನಂಬುವುದಿಲ್ಲ ಎಂದರು.
ರಾಜ್ಯದಲ್ಲಿ ಶಾಸಕ ಎಸ್.ಅಂಗಾರ ಮತ್ತು ನಾನು ಇಬ್ಬರು ಹಿರಿಯರಿದ್ದೇವೆ. ಅರ್ಹರನ್ನು ಕೇಂದ್ರ ಸಮಿತಿ ಶಿಫಾರಸು ಮಾಡುತ್ತಾರೆ ಎನ್ನುವ ನಂಬಿಕೆ ನನಗೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಸರ್ಕಾರವಿದೆ. ಅವರ ಮಾರ್ಗದರ್ಶನದಲ್ಲಿ ಮುಂದಿನ ದಿನಗಳಲ್ಲಿ ಅವರ ನೇತೃತ್ವದಲ್ಲಿ ಸರ್ಕಾರ ನಡೆಯಬೇಕು ಎನ್ನುವುದು ನಮ್ಮ ಅಭಿಪ್ರಾಯ ಎಂದು ಇದೇ ವೇಳೆ ಸಿಎಂ ಬದಲಾವಣೆ ವದಂತಿ ಬಗ್ಗೆ ಅಪ್ಪಚ್ಚು ರಂಜನ್ ಪ್ರತಿಕ್ರಿಯಿಸಿದ್ದಾರೆ.