– ಬಿಎಸ್ವೈಯನ್ನು ಹಾಡಿ ಹೊಗಳಿದ ಕಟೀಲ್
ಉಡುಪಿ: ನಾನು ರಾಜಕಾರಣದಲ್ಲಿ ಖುಷಿ ಕಂಡವ ಅಲ್ಲ. ರಾಜಕೀಯಕ್ಕೆ ಬರಬೇಕೆಂದು ಬಯಸಿ ಬಂದವನಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಉಡುಪಿಯ ಸಣ್ಣಕ್ಕಿಬೆಟ್ಟಿನಲ್ಲಿ ನಡೆದ ಕೇದಾರೋತ್ಥಾನ ಟ್ರಸ್ಟ್ ಬೇಸಾಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಹಿರಿಯರ ಅಪೇಕ್ಷೆಯಂತೆ ರಾಜಕೀಯಕ್ಕೆ ಬಂದಿದ್ದೇನೆ. ರಾಜಕೀಯಕ್ಕೆ ಬರುವ ಇಚ್ಛೆ ನನಗೆ ಇರಲಿಲ್ಲ. ಜೀವನದಲ್ಲಿ ಕೃಷಿಕನಾಗಿ ಇರಬೇಕು ಎಂದು ಬಯಸಿದ್ದೆ. ಭಗವಂತ ಕೆಲವೊಮ್ಮೆ ಒಳ್ಳೆದು ಬರೆಯುತ್ತಾನೆ. ರಾಜಕೀಯಕ್ಕೆ ಬಂದ ಮೇಲೆ ನನ್ನ ಹಣೆಯಲ್ಲಿ ಒಳ್ಳೆಯದನ್ನು ಬರೆದಿದ್ದಾನೆ ಎಂದಿದ್ದಾರೆ.
ಕೃಷಿಗೆ ಪ್ರಧಾನ ಆದ್ಯತೆ ಕೊಟ್ಟಿರುವುದು ಬಿಜೆಪಿ ಸರ್ಕಾರ. ಈ ರಾಜ್ಯದಲ್ಲಿ ಮೊದಲ ರೈತರ ಬಜೆಟ್ ಮಂಡನೆ ಮಾಡಿದವರು ಯಡಿಯೂರಪ್ಪ. ರೈತ ಗೀತೆಗೆ ಗೌರವ ಕೊಟ್ಟವರು ಯಡಿಯೂರಪ್ಪ ಎಂದು ಕಟೀಲ್ ಮುಖ್ಯಮಂತ್ರಿ ಬಿಎಸ್ವೈಯನ್ನು ಹಾಡಿ ಹೊಗಳಿದ್ದಾರೆ.
ರೈತರ ಸಾಲ ಮನ್ನಾ ಮಾಡಿದ ಮೊದಲ ಮುಖ್ಯಮಂತ್ರಿ ಯಡಿಯೂರಪ್ಪ. ನರೇಂದ್ರ ಮೋದಿ ರೈತರಿಗೆ ಕಿಸಾನ್ ಸಮ್ಮಾನ್ ಮೂಲಕ 6,000 ರೂ. ಪ್ರೋತ್ಸಾಹ ಧನ ಕೊಟ್ಟರು. ಇದು ಕಡಿಮೆ ಆಯಿತು ಎಂದು 4,000 ರೂ. ಹೆಚ್ಚುವರಿ ಕೊಟ್ಟವರು ಯಡಿಯೂರಪ್ಪ. ಕೃಷಿಗೆ ಆದ್ಯತೆ ಕೊಟ್ಟಿದ್ದು ನಮ್ಮ ಸರ್ಕಾರ ಎಂದು ಹೇಳಿದ್ದಾರೆ. ಇದನ್ನೂ ಓದಿ:ರಾಜ್ಯ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ- ದೆಹಲಿಗೆ ಹಾರಿದ ಸಚಿವ ನಿರಾಣಿ