-ಶೃಂಗೇರಿ ಶ್ರೀಗಳಿಂದ ಟಿಪ್ಪು ಬಗ್ಗೆ ಕೇಳಿ ತಿಳಿಯಿರಿ
-ವಿಶ್ವನಾಥ್ ಪುಸ್ತಕ ಬರೆದವರು, ಇತಿಹಾಸ ಅರಿತವರು
-ಟಿಪ್ಪು ಪಠ್ಯ ಕೈ ಬಿಡಲು ಸುರೇಶ್ ಕುಮಾರ್ ಮೇಲೆ ಒತ್ತಡ
ಬೆಂಗಳೂರು: ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ನಡೆದಿದ್ದು ಕೋಮು ಗಲಭೆ ಅಲ್ಲ ಎಂದು ನಾನು ಅವತ್ತೆ ಹೇಳಿದ್ದೆ. ಅಂದು ನಡೆದಿದ್ದು ಡ್ರಗ್ ಮಾಫಿಯಾ ಹಾಗೂ ಪೊಲೀಸರ ನಡುವಿನ ಹೊಡೆದಾಟ. ಅವನಿಗೆ ಡ್ರಗ್ಸ್ ಮಾರೋಕೆ ಬಿಡ್ತಾರೆ, ನನಗೆ ಬಿಡಲ್ಲ ಅಂತ ಗಲಾಟೆ ಶುರುವಾಯ್ತು ಇಂದು ಪೊಲೀಸ್ ಕಮೀಷನರ್ ಹೇಳಿದ್ದಾರೆ. ನಾನು ಮಹಾಭಾರತದ ಜಯ ವಿಜಯ ಇದ್ದ ಹಾಗೆ. ಕೆಲ ವಿಷಯಗಳ ನನಗೆ ಮೊದಲೇ ಗೊತ್ತಾಗುತ್ತೆ, ಹೇಳಿದ್ರೆ ಯಾರು ನಂಬಲ್ಲ ಎಂದು ಕಾಂಗ್ರೆಸ್ ನಾಯಕ ಸಿ.ಎಂ. ಇಬ್ರಾಹಿಂ ಹೇಳಿದ್ರು.
ಶೃಂಗೇರಿಯಲ್ಲಿ ಶಂಕರಾಚಾರ್ಯ ಮೂರ್ತಿ ಮೇಲೆ ಧ್ವಜ ಹಾಕಿದ ಪ್ರಕರಣದಲ್ಲಿ ಗೂಬೆ ಕೂರಿಸೋಕೆ ಹೋಗಿದ್ದರು. ನಂತರ ಕುಡಿದವನು ತರೋದು ನೋಡಿ ಸುಮ್ಮನಾದ್ರು. ಕಿಡಿಗೇಡಿಗಳು ಎಲ್ಲ ಸಮಾಜದಲ್ಲೂ ಇದ್ದಾರೆ. ಹಿಂದೂಗಳಲ್ಲೂ ಇದ್ದಾರೆ, ಮುಸ್ಲಿಮರಲ್ಲೂ ಇದ್ದಾರೆ. ಯಾರೋ ಒಬ್ಬರು ಮಾಡಿದ ತಪ್ಪಿಗೆ ಇಡೀ ಸಮಾಜವನ್ನ ದೂಷಿಸೋದು ಬೇಡ. ಯಾರ ಹೃದಯ ಚೆನ್ನಾಗಿದೆ ಅವರಿಗೆ ಟಿಪ್ಪು ಚೆನ್ನಾಗಿದ್ದಾನೆ. ಯಾರಿಗೆ ಜಾತಿ ವೈರಸ್ ಇದ್ಯೋ ಅವರಿಗೆ ಟಿಪ್ಪು ವಿರೋಧಿ. ಮಾಜಿ ಸಚಿವ ಹೆಚ್ ವಿಶ್ವನಾಥ್ ಮೈಸೂರಿನವರಾಗಿದ್ದು, ಪುಸ್ತಕ ಬರೆದವರು, ಇತಿಹಾಸ ಅರಿತವರು. ಅವರು ಯಾವ ಪಾರ್ಟಿಯಲ್ಲಿದ್ದಾರೆ ಬೇಕಿಲ್ಲ. ಈ ಹಿಂದೆ ಯಡಿಯೂರಪ್ಪ ಮತ್ತು ರಾಷ್ಟ್ರೊಪತಿಗಳು ಟಿಪ್ಪು ಗುಣಗಾನ ಮಾಡಿದ್ದರು ಎಂದರು.
ಇಷ್ಟು ದಿನ ವೋಟ್ ಬ್ಯಾಂಕ್ ಅಂತ ಕಾಂಗ್ರೆಸ್ ನವರನ್ನ ದೂರುತ್ತಿದ್ದರು. ಇಲ್ಲಿಯವರೆಗೆ ಹಿಂದುತ್ವದ ಬಗ್ಗೆ ಮಾತನಾಡಿದ್ರು. ಶೃಂಗೇರಿ ಶ್ರೀಗಳ ಬಗ್ಗೆ ನಿಮಗೆ ನಂಬಿಕೆಯಿದೆಯಲ್ಲ .ಆ ಶ್ರೀಗಳ ಬಳಿಯೇ ಟಿಪ್ಪು ಬಗ್ಗೆ ಕೇಳಿ ಬಿಜೆಪಿಯವರು ತಿಳಿದುಕೊಳ್ಳಬೇಕಿದೆ. ನಂಜನಗೂಡು ದೇಗುಲಕ್ಕೆ ಟಿಪ್ಪು ಕೊಟ್ಟ ಪಚ್ಚೆವಜ್ರಕ್ಕೆ ಇವತ್ತಿಗೂ ಮಂಗಳಾರತಿ ನಡೆಯುತ್ತೆ. ನಂತರ ಶ್ರೀಕಂಠೇಶ್ವರನಿಗೆ ಪೂಜೆ ಆಗುತ್ತೆ. ಶೃಂಗೇರಿಯಲ್ಲಿ 1000 ಬ್ರಾಹ್ಮಣರ ಊಟಕ್ಕೆ ಟಿಪ್ಪು ಖಜಾನೆಯಿಂದ ಹಣ ಹೋಗ್ತಿತ್ತು. ಮಲಗಿದವರನ್ನ ಎಬ್ಬಿಸಬಹುದು. ಆದ್ರೆ ಕಣ್ಣು ಮುಚ್ಚಿ ಕುಳಿತವರನ್ನ ಎಬ್ಬಿಸೋದು ಕಷ್ಟ. ವಿಶ್ವನಾಥ್ ಅವರು ಸತ್ಯವನ್ನ ಹೊರಗೆ ಹಾಕಿದ್ದಾರೆ ಎಂದು ತಿಳಿಸಿದರು.
ಹೆಚ್.ವಿಶ್ವನಾಥ್ ಸಚಿವರಾಗಬೇಕು ಅನ್ನೋದು ನನ್ನ ಆಸೆಯೂ ಹೌದು. ಸುಮ್ಮನೆ ಬಿಜೆಪಿ ಅಂತ ವಿರೋಧ ಮಾಡೋದಲ್ಲ. ಸಚಿವ ಸುರೇಶ್ ಕುಮಾರ್ ಅವರ ಬಗ್ಗೆ ನನಗೆ ಪ್ರೀತಿಯಿದೆ. ನಾನು ಪಕ್ಷಾತೀತ ರಾಜಕಾರಣ ಮಾಡುವವನು. ಪಠ್ಯದಿಂದ ಟಿಪ್ಪು ಕೈಬಿಡೋಕೆ ಸುರೇಶ್ ಕುಮಾರ್ ಮೇಲೆ ಒತ್ತಡವಿದೆ ಎಂದು ಆರೋಪಿಸಿದರು.