– ಮನೆ ಮನೆಗೆ ಆರೋಗ್ಯ ಸಮೀಕ್ಷೆ
ನೆಲಮಂಗಲ: ಸಿಲಿಕಾನ್ ಸಿಟಿ ಹಾಗೂ ಸುತ್ತಮುತ್ತ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಈ ಹಿನ್ನೆಲೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಪ್ರತಿ ಮನೆಗೆ ಹೋಗಿ ಕೊರೊನಾ ಪರೀಕ್ಷೆ ಮಾಡುವ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ದಾಸನಪುರ ಹೋಬಳಿ ಮತಗಟ್ಟೆ ಮಟ್ಟದ, ಟಾಸ್ಕ್ ಫೋರ್ಸ್ ಸಮಿತಿ ವತಿಯಿಂದ ಮನೆಮನೆಗೆ ಆರೋಗ್ಯ ಸಮೀಕ್ಷೆ ಎಂಬ ಶೀರ್ಷಿಕೆಯಡಿ ನಾನು ನನ್ನ ಕುಟುಂಬ, ನನ್ನ ಬೂತ್ ಕೊರೊನಾ ವೈರಸ್ ಮುಕ್ತಗೊಳಿಸುವುದು ಎಂಬ ಸಂಕಲ್ಪಕ್ಕೆ ಚಾಲನೆ ನೀಡಿದ್ದಾರೆ.
ಬಳಿಕ ಮಾತನಾಡಿದ ವಿಶ್ವನಾಥ್, ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಕೋವಿಡ್-19 ಹೆಚ್ಚಾಗಿ ಹರಡುತ್ತಿರುವ ಹಿನ್ನೆಲೆ ಯಲಹಂಕ ಹಾಗೂ ಬ್ಯಾಟರಾಯನಪುರ ಕ್ಷೇತ್ರದ ಉಸ್ತುವಾರಿ ವಹಿಸಿದ್ದಾರೆ. ಕೆಲವು ಧ್ಯೇಯ ಉದ್ದೇಶಗಳೊಂದಿಗೆ ಪ್ರತಿ ಮನೆಗೆ ಹೋಗಿ ಅವರ ಪರೀಕ್ಷೆ ಮಾಡಲಾಗುತ್ತಿದ್ದು, ಬೇರೆ ರಾಜ್ಯದಿಂದ ಬಂದವರ ಮೇಲೆ ನಿಗಾವಹಿಸುವುದು, ಪ್ರತಿ ಬೂತಿಗೆ 10 ರಿಂದ 15 ಜನ ಸ್ಥಳೀಯ ಚುನಾಯಿತ ಪ್ರತಿನಿಧಿಗಳು, 3 ಜನ ಅಧಿಕಾರಿಗಳು ಕೂಡ ಇರುತ್ತಾರೆ. ಅವರಿಗೆ ಎಲ್ಲಾ ಯಂತ್ರಗಳನ್ನು ನೀಡಿದ್ದು, ಮಾಕಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚೆಕ್ ಮಾಡಿ, ಅನುಮಾನಸ್ಪದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲು ವ್ಯವಸ್ಥೆ ಮಾಡಿದ್ದೇವೆ ಎಂದು ತಿಳಿಸಿದರು.
ಪ್ರತಿ ಮನೆಗೆ ಹೋಗಿ ಚೆಕ್ ಮಾಡಲು ಎಲ್ಲ ರಕ್ಷಣಾ ಸಾಮಗ್ರಿ ನೀಡಲಾಗಿದೆ. ದಾಸನಪುರ ಹೋಬಳಿಯಲ್ಲಿ ಮೂರು ಬೂತ್ ಮಟ್ಟದಲ್ಲಿ ಎಲ್ಲ ಕೆಲಸ ಮಾಡಲಾಗುತ್ತಿದ್ದು, ಕೊರೊನಾ ನಿಯಂತ್ರಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಮಾದವರ ಕೋವಿಡ್-19 ಕೇಂದ್ರದಲ್ಲಿ ಈಗ 6500 ಬೆಡ್ ಗಳು ರೆಡಿ ಇವೆ. ಮುಂದಿನ ದಿನದಲ್ಲಿ ಎಲ್ಲವನ್ನೂ ಸಿದ್ಧತೆ ಮಾಡಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಶಿವರಾಜು, ಬಿಇಒ ಕಮಲಾಕರ್ ಹಾಗೂ ಇತರರು ಇದ್ದರು.