ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಕೊರೊನಾ 2ನೇ ಅಲೆ ತೀವ್ರಗೊಳ್ಳುತ್ತಿದ್ದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಜಾರಿಗೆ ಮುಂದಾಗಿದೆ. ಜಿಲ್ಲೆಯಲ್ಲಿ ಮಾಸ್ಕ್ ಧರಿಸದೇ ಓಡಾಡುವವರಿಗೆ ಸ್ಥಳದಲ್ಲಿಯೇ ದಂಡ ವಿಧಿಸಿ ಬಿಸಿ ಮುಟ್ಟಿಸುತ್ತಿದೆ.
ಸ್ವತಃ ಡಿಸಿ ನಿತೇಶ್ ಪಾಟೀಲ್ ನೇತೃತ್ವದಲ್ಲಿ ಅಧಿಕಾರಿಗಳು ದಂಡ ಕಾರ್ಯಾಚರಣೆಗೆ ಇಳಿದಿದ್ದು ಮಾಸ್ಕ್ ಹಾಗೂ ಸಾಮಾಜಿಕ ಅಂತರ ಪಾಲನೆ ಮಾಡದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ.
ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಜನನಿಬಿಡ ಪ್ರದೇಶಗಳಿಗೆ ಭೇಟಿ ನೀಡಿ ಮಾಸ್ಕ್ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹುಬ್ಬಳ್ಳಿಯ ಅರ್ಬನ್ ಓಯಾಸಿಸ್ ಮಾಲ್ಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳನ್ನು ಕಂಡು ಮಾಸ್ಕ್ ಧರಿಸದ ಜನರು ಅಲ್ಲಿಂದ ಪರಾರಿಯಾಗಲು ಯತ್ನಿಸಿದರು. ಈ ವೇಳೆ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ದಂಡ ವಿಧಿಸಲು ಮುಂದಾದ ಅಧಿಕಾರಿಗಳ ಜೊತೆ ವಾಗ್ವಾದಕ್ಕೆ ಇಳಿದು ಜಗಳ ಮಾಡಿದ ಘಟನೆ ನಡೆದಿದೆ.
ಸಾಮಾನ್ಯ ಜನರಿಗೆ ದಂಡ ವಿಧಿಸುತ್ತೀರಾ? ಅದೇ ರೀತಿ ನಿಮ್ಮ ಪತ್ನಿಗೂ ದಂಡ ಹಾಕುವ ತಾಕತ್ತು ನಿಮಗೆ ಇದ್ಯಾ ಎಂದು ಡಿಸಿ ಸಮ್ಮುಖದಲ್ಲೇ ಅಧಿಕಾರಿಗಳ ಜೊತೆ ವಾಗ್ದಾದ ನಡೆಸಿದರು. ಇದರಿಂದ ಸಿಟ್ಟಾದ ಅಧಿಕಾರಿಗಳು ವ್ಯಕ್ತಿಯನ್ನು ತಡೆದು ಮಹಿಳೆ ಮಾಸ್ಕ್ ಧರಿಸದಿರುವುದಕ್ಕೆ ದಂಡ ಕಟ್ಟಲೇಬೇಕು. ಇಲ್ಲದಿದ್ದರೇ ಕಠಿಣ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಈ ವೇಳೆ ಪೊಲೀಸ್ ಸಿಬ್ಬಂದಿ ಜೊತೆ ವಾಗ್ವಾದಕ್ಕೆ ಇಳಿದ ವ್ಯಕ್ತಿ ನಾನು ದಲಿತ ನಾಯಕ, ಸುಮ್ಮನೆ ಬಿಡುವುದಿಲ್ಲ ಎಂದು ಅಧಿಕಾರಿಗಳಿಗೆ ಅವಾಜ್ ಹಾಕಿದರು. ಇದರಿಂದ ಸಿಟ್ಟಾದ ಡಿಸಿ ಹಾಗೂ ತಹಶೀಲ್ದಾರ್ ಸೇರಿದಂತೆ ಉಳಿದ ಸಿಬ್ಬಂದಿ ಸ್ಥಳದಲ್ಲೇ ದಂಡ ಕಟ್ಟಿ ಎಂದು ಎಚ್ಚರಿಕೆ ನೀಡಿದರು.
ಆಗ ನನ್ನ ಬಳಿ 150 ರೂಪಾಯಿ ಮಾತ್ರ ಇದೆ ಎಂದು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರು. ಆದರೆ ಅಧಿಕಾರಿಗಳು 250 ರೂಪಾಯಿ ದಂಡ ಕಟ್ಟಿಸಿಕೊಂಡು ಸ್ಥಳದಲ್ಲೇ ಬಿಸಿ ಮುಟ್ಟಿಸಿದ್ದಾರೆ.