– 22 ಲಕ್ಷದ 79 ಸಾವಿರದ 772 ರೂ. ಸಂಗ್ರಹ
ಹಾಸನ: ಹಾಸನಾಂಬೆಯ ಹುಂಡಿಗೆ ಎಂದಿನಂತೆ ಈ ಬಾರಿಯೂ ಕಾಣಿಕೆ ಜೊತೆಗೆ ವಿವಿಧ ರೀತಿಯ ನಿವೇದನೆ ಸಲ್ಲಿಸಿ ಭಕ್ತರು ಪತ್ರ ಬರೆದು ಹಾಕಿದ್ದಾರೆ.
ಕೌಟುಂಬಿಕ ಸಮಸ್ಯೆ, ಸಾಲ ತೀರಿಸು, ಹಣಕಾಸು ಸಮಸ್ಯೆ ಬಗೆಹರಿಸು ತಾಯಿ, ಒಳ್ಳೆಯ ಕೆಲಸ ಕೊಡಿಸು, ನನಗೆ ನನ್ನ ಹೆಂಡತಿ ಮಕ್ಕಳು ಬೇಕು, ನನಗೆ ಮದುವೆ ಆಗಬೇಕು ಅಮ್ಮ, ದೊಡ್ಡಮೊತ್ತದ ಲಾಟರಿ ಹೊಡೆಸು ತಾಯಿ, ಕುಟುಂಬದವರನ್ನು ಕಾಪಾಡು ತಾಯಿ, ಪ್ರಾಣಿ ಪಕ್ಷಿಗಳನ್ನು ಕಾಪಾಡು ತಾಯಿ ಹಾಸನಾಂಬೆ ಎಂದು ಹಲವರು ಪ್ರಾರ್ಥನೆ ಸಲ್ಲಿಸಿದ್ದರು.
ಕೊರೊನಾ ಹೋಗಲಾಡಿಸು ಎಂದು ಕೇಳಿಕೊಂಡಿರುವ ಹಲವರು, ಪತ್ನಿ-ಮಕ್ಕಳ ಒಂದು ಮಾಡು, ನನ್ನ ಗಂಡ ಕುಡಿಯುವುದು ಬಿಡಿಸು ಎಂದು ಪತ್ರದ ಮೂಲಕ ನಿವೇದನೆ ಮಾಡಿಕೊಂಡಿದ್ದರು. ಇದೇ ರೀತಿ ಹಾಸನಾಂಬೆ ಪಾಸ್ ವಿತರಣೆ ತಾರತಮ್ಯದ ವಿರುದ್ಧ ಪತ್ರದ ಮೂಲಕ ಕೆಲವರು ಅಸಮಾಧಾನ ಹೊರಹಾಕಿದ್ದರು. ಮತ್ತೊಬ್ಬ ಭಕ್ತನಂತು ಕುಡಿಯುವುದನ್ನು ಬಿಡುತ್ತೇನೆ. ಆದರೆ ಸಂಜೆ ಸ್ವಲ್ಪ ಸ್ವಲ್ಪ ಕುಡಿಯುತ್ತೇನೆ ಎಂದು ಬರೆದು ಹಾಕಿದ್ದ.
ಪತ್ರಿವರ್ಷ ಕಾಣಿಕೆ ರೂಪದಲ್ಲಿ ಕೋಟಿ ಕೋಟಿ ಬರುತ್ತಿದ್ದ ಆದಾಯ ಇಳಿಕೆ ಕಂಡಿದ್ದು, ಈ ಬಾರಿ ಸಾರ್ವಜನಿಕ ದರ್ಶನ ನಿಷೇಧದಿಂದ ಆದಾಯ ಕಡಿಮೆಯಾಗಿದೆ. ಹುಂಡಿಯಲ್ಲಿ ಈ ಬಾರಿ 22 ಲಕ್ಷದ 79 ಸಾವಿರದ 772 ರೂಪಾಯಿ ಸಂಗ್ರಹವಾಗಿದೆ. ಈ ಬಾರಿ ಸಾರ್ವಜನಿಕರಿಗೆ ದೇವಿ ದರ್ಶನ ನಿರ್ಬಂಧ ಹಿನ್ನೆಲೆಯಲ್ಲಿ ಹುಂಡಿ ಹಣದಲ್ಲಿ ಭಾರೀ ಇಳಿಕೆಯಾಗಿದೆ. ಕಳೆದ ವರ್ಷ 10 ದಿನಗಳಲ್ಲಿ ಮೂರೂವರೆ ಕೋಟಿ ಹಣ ಹುಂಡಿಯಲ್ಲಿ ಸಂಗ್ರಹವಾಗಿತ್ತು. ಈ ಬಾರಿ ಕೊರೊನಾ ಎಫೆಕ್ಟ್ ನಿಂದ ನವೆಂಬರ್ 5 ರಿಂದ 16 ರವೆರೆಗೆ ನಡೆದಿದ್ದ ಹಾಸನಾಂಬೆ ಉತ್ಸವ ಸರಳವಾಗಿ ನಡೆಸಲಾಗಿತ್ತು.