ರಾಮನಗರ: ಸುಮ್ಮನೆ ನಮ್ಮ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಬೇಡಿ. ನಾನು ಒಬ್ಬ ಮಹಿಳೆ ಇದ್ದೇನೆ, ನನಗೂ ಸಹಕಾರ ಕೊಡಿ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಮನವಿ ಮಾಡಿದರು.
ರಾಮನಗರದ ರಾಜೀವ್ ಗಾಂಧಿಪುರದಲ್ಲಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ಮಾಡಲು ಆಗಮಿಸಿದ್ದರು. ನಂತರ ಅಲ್ಲಿನ ಜನರ ಕಷ್ಟಸುಖಗಳನ್ನ ಆಲಿಸಿದ ಬಳಿದ ಮಾಧ್ಯಮದವರಿಗೆ ಜೊತೆಗೆ ಮಾತನಾಡುತ್ತಾ ಗರಂ ಆದರು. ನಾನು ರಾಜಕಾರಣ ಮಾಡಲು ಬಂದಿಲ್ಲ, ಸಮಾಜಸೇವೆ ಮಾಡಲು ಬಂದಿದ್ದೇನೆ. ಬಡವರು ಅಂದರೆ ನಾನು ಪಕ್ಷ ನೋಡದೆ ಸಹಾಯ ಮಾಡಿದ್ದೇನೆ. ರಾಜಕಾರಣದ ಸಮಯದಲ್ಲಿ ರಾಜಕೀಯ, ಆದರೆ ಬಡವರ ವಿಚಾರದಲ್ಲಿ ರಾಜಕೀಯ ಮಾಡಿಲ್ಲ ಎಂದರು.
ಕೊರೋನಾ ಸಂದರ್ಭದಲ್ಲಿ ನಾನು, ಪತಿ ಕುಮಾರಸ್ವಾಮಿ, ಮಗ ನಿಖಿಲ್ ಜೊತೆಗೆ ಸೊಸೆಯೂ ಬಂದಿದ್ದರು. ಬಡವರಿಗೆ ಫುಡ್ ಕಿಟ್ ಜೊತೆಗೆ ಹೆಲ್ತ್ ಕಿಟ್ ಕೂಡ ಕೊಟ್ಟಿದ್ದೇವೆ. ಜೊತೆಗೆ ರಾಮನಗರದ ಎಪಿಎಂಸಿ, ರೇಷ್ಮೆ ಮಾರ್ಕೆಟ್ ನಲ್ಲಿ ಸ್ಯಾನಿಟೈಜರ್ ಟನಲ್ ಹಾಕಿಸಿದ್ದೆವು. ಇಷ್ಟೆಲ್ಲ ಕೆಲಸ ಬೇರೆ ಯಾವ ತಾಲೂಕಿನಲ್ಲಿ ಆಗಿದೆ ಹೇಳಿ ಎಂದು ಮಾಧ್ಯಮದವರನ್ನು ಪ್ರಶ್ನೆ ಮಾಡಿದರು.
ಇದೇ ವೇಳೆ ರಾಮನಗರ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವರೆಲ್ಲರೂ ನಮ್ಮ ಮನೆಯವರು. ಯಾರು ಕೂಡ ಪಕ್ಷ ಬಿಡುವುದಿಲ್ಲ ಎಂದು ಅನಿತಾ ವಿಶ್ವಾಸ ವ್ಯಕ್ತಪಡಿಸಿದರು.