ಬೆಂಗಳೂರು: ವಿಧಾನಸೌಧದ ಲಾಂಜ್ನಲ್ಲಿರುವ ಕ್ಯಾಂಟೀನ್ನಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ಶಾಸಕ ಬೆಳ್ಳಿ ಪ್ರಕಾಶ್ ನಿರಾಕರಿಸಿದ್ದಾರೆ.
ಮಾಧ್ಯಮಗಳನ್ನು ಕಂಡ ಕೂಡಲೇ ಅಣ್ಣತಮ್ಮಂದಿರ ಗಲಾಟೆ ಬಿಡ್ರಣ್ಣ, ನಾನು ಇನ್ನೂ ಬೆಳೆಯುತ್ತಿರೋನು, ರಿಯಾಕ್ಷನ್ ಬೇಡ ಎಂದು ಹೇಳಿ ಹೊರಟಿದ್ದಾರೆ.
ಏನಿದು ಗಲಾಟೆ?:
ಕ್ಯಾಂಟೀನ್ ನಲ್ಲಿ ಇಂದು ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಮತ್ತು ಸಚಿವ ನಾರಾಯಣಗೌಡ ನಡುವೆ ಜಗಳ ನಡೆದಿದೆ. ಈ ಗಲಾಟೆ ಹೊಡೆದಾಟದ ಹಂತಕ್ಕೂ ಹೋಗಿದೆ. ಈ ಗಲಾಟೆ ಮಾಜಿ ಸಿಎಂ ಸಿದ್ದರಾಮಯ್ಯ, ಈಶ್ವರಪ್ಪ, ಸೋಮಣ್ಣ, ಸಿ.ಡಿ.ರವಿ ಎಲ್ಲರ ಸಮ್ಮುಖದಲ್ಲಿ ನಡೆದಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಕಡೂರು ಕ್ಷೇತ್ರಕ್ಕೆ ತೋಟಗಾರಿಕೆ ಇಲಾಖೆಯಿಂದ ನೀಡಬೇಕಿದ್ದ ಅನುದಾನ ತಾರತಮ್ಯವಾದ ಹಿನ್ನೆಲೆಯಲ್ಲಿ ಗಲಾಟೆ ನಡೆದಿದೆ. ಗಲಾಟೆಯಲ್ಲಿ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಅವರು ಸಚಿವ ನಾರಾಯಣಗೌಡ ಅವರಿಗೆ ಏಕವಚನದಲ್ಲಿ ಬೈದಿದ್ದಾರೆ ಎನ್ನಲಾಗಿದೆ. ಬೆಳ್ಳಿ ಪ್ರಕಾಶ್ ಮೊದಲ ಬಾರಿ ಗೆದ್ದು ಕಡೂರು ಶಾಸಕರಾಗಿದ್ದಾರೆ. ಅನೇಕ ತಿಂಗಳ ಹಿಂದೆಯೇ ತಮ್ಮ ಕ್ಷೇತ್ರಕ್ಕೆ ಅನುದಾನ ಕೊಡಿ ಎಂದು ಮನವಿ ಮಾಡಿಕೊಂಡಿದ್ದರು. ಆದರೆ ಸಚಿವರು ಅನುದಾನ ಕೊಡದೇ ಸತಾಯಿಸುತ್ತಿದ್ದರು ಎನ್ನಲಾಗಿದೆ. ಇದರಿಂದ ಅಸಮಾಧನಾಗೊಂಡಿದ್ದ ಶಾಸಕ ಬೆಳ್ಳಿ ಕ್ಯಾಂಟೀನ್ನಲ್ಲಿ ಅನುದಾನ ಬಿಡುಗಡೆಯ ಮಾಡದ್ದಕ್ಕೆ ಆಕ್ರೋಶ ವ್ಯಕ್ತಪಿಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಗಲಾಟೆಯಲ್ಲಿ ಸಚಿವ ನಾರಾಯಣ ಗೌಡರಿಗೆ ಏಟು ಬಿದ್ದಿದ್ದು, ಶಾಸಕ ಬೆಳ್ಳಿ ಪ್ರಕಾಶ್ ಅವರ ಹೊಟ್ಟೆಗೆ ಗುದ್ದಿದ್ದಾರೆ ಎನ್ನಲಾಗಿದೆ. ಈ ವೇಳೆ ಜೆಡಿಎಸ್ ಶಾಸಕ ಅನ್ನಧಾನಿ ಬಂದು ಹೊಡೆದಾಟ ಬಿಡಿಸಿದ್ದಾರೆ. ಸಿದ್ದರಾಮಯ್ಯ ಕಣ್ಣ ಮುಂದೆಯೇ ಶಾಸಕ ಬೆಳ್ಳಿ ಪ್ರಕಾಶ್ ಮುಷ್ಟಿ ಬಿಗಿ ಹಿಡಿದು ನಾರಾಯಣ ಗೌಡರ ಹೊಟ್ಟೆಗೆ ಬಲವಾಗಿ ಗುದ್ದಿದ್ದಾರೆ ಎಂದು ಹೇಳಲಾಗುತ್ತಿದೆ.