ಬೆಂಗಳೂರು: ಕನ್ನಡ ಚಿತ್ರರಂಗ ದಿನ ದಿನಕ್ಕೆ ಒಂದೊಂದೇ ಹೆಸರುಗಳನ್ನು ಕೇಳಿ ಬೆಚ್ಚುತ್ತಿದೆ. ಈಗಾಗಲೇ ಖಾಕಿ ಪಡೆ ಸ್ಯಾಂಡಲ್ವುಡ್ ಕೆಲವು ನಟ-ನಟಿಯರನ್ನು ಡ್ರಗ್ಸ್ ಜಾಲದ ವಿಷಯದಲ್ಲಿ ಕರೆದು ವಿಚಾರಣೆ ನಡೆಸಿದ್ದು, ಈಗಲೂ ನಡೆಸುತ್ತಿದೆ. ರಾಗಿಣಿ ಮತ್ತು ಸಂಜನಾ ಜೈಲು ಪಾಲಾಗಿದ್ದಾರೆ. ಇದರ ಬೆನ್ನಿಗೇ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಹೊಸ ಬಾಂಬ್ ಸಿಡಿಸಿದ್ದಾರೆ. ಕನ್ನಡದ ಎ ವನ್ ಸ್ಟಾರ್ಗಳೂ ಇದರಲ್ಲಿದ್ದಾರೆ ಎಂದು ಗುಡುಗಿದ್ದಾರೆ.
ಹೌದು. ಸ್ಯಾಂಡಲ್ವುಡ್ನಲ್ಲಿ ಎದ್ದಿರುವ ಡ್ರಗ್ಸ್ ಸುಂಟರಗಾಳಿ ಇನ್ನೂ ನಿಂತಿಲ್ಲ. ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕೂಡ ಕಾಣುತ್ತಿಲ್ಲ. ಸ್ಯಾಂಡಲ್ವುಡ್ ಡ್ರಗ್ಸ್ ಕೇಸ್ ತನಿಖೆ ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ತಿದೆ. ಬಂಧಿತ ಆರೋಪಿಗಳಿಂದ ಮಹತ್ವದ ಮಾಹಿತಿ ಕಲೆ ಹಾಕಿರುವ ಸಿಸಿಬಿ ಇನ್ನೂ ಒಂದೆರಡು ದಿನಗಳಲ್ಲೇ ಆಪರೇಷನ್ ಪಾರ್ಟ್-2 ನಡೆಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ತಿದೆ. ಸಿಸಿಬಿ ಮೂಲಗಳ ಪ್ರಕಾರ, ಕೇವಲ ನಟಿ ಸಂಜನಾ, ರಾಗಿಣಿ, ದಿಗಂತ್, ಐಂದ್ರಿತಾ, ಅಕುಲ್ ಬಾಲಾಜಿ, ಸಂತೋಷ್ ಆರ್ಯನ್ ಮಾತ್ರವಲ್ಲ, ಬಣ್ಣದ ಲೋಕದ ಇನ್ನಷ್ಟು ದೊಡ್ಡ ಮಂದಿ ಈ ವಿಷಜಾಲದಲ್ಲಿ ಸಿಲುಕಿರುವ ಶಂಕೆಯಿದೆ.
ಸದ್ಯ ಸಿಸಿಬಿ ತಯಾರಿಸಿರುವ ಪಟ್ಟಿಯಲ್ಲಿ ಸೆವೆನ್ ಸ್ಟಾರ್ಗಳ ಇದ್ದಾರೆ. ಕನ್ನಡ ಚಿತ್ರರಂಗದ ನಾಲ್ವರು ಹೀರೋಗಳು, ಮೂವರು ಹೀರೋಯಿನ್ಗಳಿಗೆ ನೊಟೀಸ್ ಜಾರಿ ಮಾಡಲು ಸಿಸಿಬಿ ಸಿದ್ಧತೆ ನಡೆಸಿದೆ. ಅಗತ್ಯಬಿದ್ರೆ ಸಂಜನಾ, ರಾಗಿಣಿ ಮಾದರಿಯಲ್ಲಿ ಸ್ಟಾರ್ ನಟರ ಮನೆಗಳ ಮೇಲೆ ದಿಢೀರ್ ರೇಡ್ ನಡೆಸಿ, ಬಂಧಿಸಲು ಕೂಡ ಸಿಸಿಬಿ ಸಿದ್ಧತೆ ನಡೆಸಿದೆ. ಈ ಬೆಳವಣಿಗೆ ಚಂದನವನವನ್ನು ತಲ್ಲಣಗೊಳಿಸಿದೆ.
ನಾಲ್ವರು ನಟರು ಯಾರು?
ಸೂಪರ್ ಹಿಟ್ ಚಿತ್ರದಲ್ಲಿ ನಟನೆ ಮಾಡಿರುವ 30 ವರ್ಷದ, ಕೆಲವೊಂದು ಜನಪ್ರಿಯ ಸಿನಿಮಾಗಳಲ್ಲಿ ಅಭಿನಯ ಮಾಡಿರುವ 40 ವರ್ಷದ, 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಹಿರಿಯ ನಟರೊಬ್ಬರ ಪುತ್ರ, ಹಾಗೂ ಸ್ಟಾರ್ ನಟರ ಜೊತೆ ಕಾಮನ್ ಪಾರ್ಟಿ ಮಾಡುತ್ತಿರುವ ಹಿರಿಯ ನಟರೊಬ್ಬರ ಇನ್ನೊಬ್ಬ ಮಗ ಎಂಬ ಮಾಹಿತಿ ಲಭಿಸಿದೆ. ಈ ನಾಲ್ವರು ಹೀರೋಗಳ ಜೊತೆ ಮೂವರು ನಟಿಯರಿಗೂ ನೋಟಿಸ್ ಕೊಡಲು ಸಿದ್ಧತೆ ನಡೆದಿದೆ.
ಮೂವರು ‘ಸ್ಟಾರ್’ ನಟಿಯರು ಯಾರು?
ಸುಮಾರು 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ ಮಾಡಿದ್ದು, ಈಗಲೂ ಜನಪ್ರಿಯವಾಗಿರುವ ಬೆಂಗಳೂರು ಮೂಲದ ನಟಿಯಾದರೆ, ಇನ್ನೊಬ್ಬರು ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟನೆ ಮಾಡಿದ್ದು, ಈಕೆ ಬೆಂಗಳೂರಿನಲ್ಲೇ ಬೆಳೆದಿದ್ದು ಹಾಗೂ ಓದಿದ್ದಾರೆ. ಮತ್ತೊಬ್ಬರು ಸುಮಾರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಉತ್ತರ ಭಾರತ ಮೂಲದ ಕನ್ನಡ ನಟಿಯಾಗಿದ್ದಾರೆ ಎಂಬ ಮಾಹಿರಿ ಲಭಿಸಿದೆ.
ಇಷ್ಟು ಮಾತ್ರವಲ್ಲದೇ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಕೂಡ ಇಬ್ಬರು ಸ್ಟಾರ್ ನಟರ ಹೆಸರನ್ನು ಸೋಮವಾರ ಬಹಿರಂಗ ಮಾಡೋದಾಗಿ ಹೇಳಿದ್ದಾರೆ. ಇದು ಊಹಾಪೋಹದ ಕತೆಯಲ್ಲ, ದಾಖಲೆ ಸಹಿತ ಹೇಳ್ತೇನೆ. ಇದು ವಿಧಾನಸೌಧದಲ್ಲೂ ಸದ್ದು ಮಾಡುತ್ತೆ ಅಂತ ಸಂಬರಗಿ ಬಾಂಬ್ ಸಿಡಿಸಿದ್ದಾರೆ.
ಒಟ್ಟಿನಲ್ಲಿ ಗಾಂಧಿನಗರ ಗಲ್ಲಿಯಲ್ಲಿ ಸೋಮವಾರ ಮಹಾಸ್ಫೋಟವೇ ಕಾದಿರುವಂತಿದೆ. ಇದನ್ನೆಲ್ಲಾ ತೆರೆ ಮರೆಯಲ್ಲಿ ನೋಡ್ತಾ ಕುಳಿತಿರುವ ನಶೆಕೋರರಿಗೆ ಢವಢವ ಶುರುವಾಗಿದೆ. ಎಲ್ಲಿ ನನ್ನ ಹೆಸರು ಬಹಿರಂಗವಾಗುತ್ತೊ..? ಎಲ್ಲಿ ನಮ್ಮ ಮನೆ ಮೇಲೆ ರೇಡ್ ಆಗುತ್ತೋ ಅನ್ನೋ ಆತಂಕದಲ್ಲಿದ್ದಾರೆ.